Saturday, January 16, 2010

ನನ್ನ ಇಂಗ್ಲಿಶ್ ಬ್ಲಾಗ್

ನನ್ನ ಇಂಗ್ಲಿಶ್ ಬ್ಲಾಗ್ ನೋಡಲು ಸಂಪರ್ಕಿಸಿ
ಅಭಿಪ್ರಾಯಗಳನ್ನು ತಿಳಿಸಿ
ಅಲ್ಲಿ ಅಥವಾ ಇಲ್ಲಿ

Friday, January 15, 2010

ಸಮಕಾಲೀನ ಸಂದರ್ಭದಲ್ಲಿ ಸಿದ್ಧಾಂತ: ತಲ್ಲಣಗಳೋ ಅಥವಾ ದಾರಿದೀಪಗಳೋ?

ತಾರಕೇಶ್ವರ್ ವಿ.ಬಿ.
ಸಂವಾದ ಮಾಸ ಪತ್ರಿಕೆಯ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ
ಅಕಾಡೆಮಿಕ್ ವಲಯಗಳಲ್ಲಿ ಇತ್ತೀಚೆಗೆ ಸಿದ್ಧಾಂತ (theory) ಎನ್ನುವುದನ್ನು ಬಹಳ ಸೀಮಿತ ಅರ್ಥದಲ್ಲಿ ಬಳಸಲಾಗುತ್ತಿದೆ. ಹೀಗೆ ಬಳಕೆ ಮಾಡುವಾಗ ಸಿದ್ದಾಂತ ಎನ್ನುವುದನ್ನು ಕ್ಯಾಪಿಟಲ್ Tಯಿಂದಲೇ ಆರಂಭಿಸುತ್ತಾರೆ. ಕ್ಯಾಪಿಟಲ್ Tಯಿಂದ ಆರಂಭಿಸಿದಾಗ ಅದರ ಅರ್ಥ ಸಂರಚನೋತ್ತರ ಅಥವಾ ಆಧುನಿಕೋತ್ತರ ಸಿದ್ಧಾಂತಗಳು ಎಂದು ಅರ್ಥ. ಇವೆರಡೂ ಒಂದೇ ಅಲ್ಲ, ಆದರೂ ಅವುಗಳನ್ನು ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತದೆ. ಇದರ ಬಗ್ಗೆ ನಂತರ ಮಾತನಾಡುತ್ತೇನೆ. ಇವುಗಳನ್ನು ಆಧುನಿಕ ಸಿದ್ಧಾಂತಗಳಿಗೆ ವಿರುದ್ಧವಾದ ಸಿದ್ಧಾಂತಗಳಾಗಿ ಭಾವಿಸಲಾಗುತ್ತದೆ. ನಾವು ಇದುವರೆವಿಗೆ ನಂಬಿಕೊಂಡು ಬಂದ ಸಿದ್ಧಾಂತಗಳು ನಮ್ಮ ನೋಟವನ್ನು ನಿರ್ಧರಿಸುತ್ತಿದ್ದವು. ನಾವು ನೋಡಿದ್ದನ್ನು ಗ್ರಹಿಸಲು, ಗ್ರಹಿಸಿದ್ದನ್ನು ಒಳ್ಳೆಯದು, ಕೆಟ್ಟದು ಎಂದು ನಿರ್ಧರಿಸಲು ಸಹಾಯಕವಾಗಿದ್ದವು. ನಾವು ನೋಡಿದ್ದನ್ನು ನಮಗೆ ಸರಿ ಎನಿಸದಿದ್ದರೆ ಬದಲಾಯಿಸಲು ಸಹ ಇವುಗಳು ಸಹಾಯಕವಾಗಿದ್ದವು. ಈ ಸಿದ್ಧಾಂತಗಳನ್ನು ಕುರಿತು ಮೂಲಭೂತ ಪ್ರಶ್ನೆಗಳನ್ನು theoryಇಂದು ಕೇಳುತ್ತದೆ. ಈ ಮೂಲಭೂತ ಪ್ರಶ್ನೆಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಈ ಕಾರಣದಿಂದಾಗಿಯೇ theoryಎನ್ನುವುದು ನಮ್ಮ ತಲ್ಲಣಗಳಿಗೆ ಕಾರಣವಾಗಿದೆ.
ನಾವು ಇದುವರೆವಿಗೆ ನಂಬಿಕೊಂಡು ಬಂದ ಆಧುನಿಕ ಸಿದ್ಧಾಂತಗಳ ಪ್ರಮುಖ ಲಕ್ಪ್ಷಣಗಳನ್ನು ವಿವರಿಸಿದರೆ ಹೊಸ ಸಿದ್ಧಾಂತಗಳು ಮೂಡಿಸಿರುವ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಬಹುದು. ಆಧುನಿಕತೆಯು ಸಮುದಾಯದ ಜಾಗದಲ್ಲಿ ವ್ಯಕ್ತಿಗಳನ್ನು (individuals) ರೂಪಿಸುತ್ತದೆ. ವ್ಯಕ್ತಿಗಳು ತಮ್ಮ ವೈಚಾರಿಕತೆಯನ್ನು (rationality-reason) ಉಪಯೋಗಿಸಿ ತಮ್ಮ ಬದುಕನ್ನು ಅರ್ಥಮಾಡಿಕೊಳ್ಳುತ್ತಾರೆ, ರೂಪಿಸಿಕೊಳ್ಳುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಅದು ಗುರುತಿಸುವ ಏಕ ಮಾತ್ರ ಸಮುದಾಯವೆಂದರೆ, ರಾಷ್ಟ್ರ’ ಮಾತ್ರ. ಪ್ರತಿಯೊಬ್ಬ ವ್ಯಕ್ತಿಯು ರಾಷ್ಟ್ರದ ಪ್ರಜೆಯಾಗಿರುತ್ತಾರೆ, ಇನ್ನಾವುದೇ ರೀತಿಯ ಗುರುತುಗಳು (identity) ಅವರಿಗೆ ಇರುವುದಿಲ್ಲ, ಇರಕೂಡದು. ರಾಷ್ಟ್ರವು ಜಾತ್ಯತೀತ (secular) ನೆಲೆಯಲ್ಲಿ ಕೆಲಸ ಮಾಡಬೇಕು, ಪ್ರತಿಯೊಬ್ಬ ಪ್ರಜೆಯು ಸಮಾನ ಹಕ್ಕುಗಳು ಮತ್ತು ಭಾದ್ಯತೆಗಳನ್ನು ಹೊಂದಿದವರಾಗಿರುತ್ತಾರೆ. ತಮಗೆ ಸರಿ ಎನ್ನಿಸಿದ ರೀತಿಯಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಅನುಸರಿಸಿ ತಮ್ಮ ರಾಷ್ಟ್ರದ ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎನ್ನುವುದನ್ನು ನಮ್ಮ ಇದುವರೆಗಿನ ಸಿದ್ಧಾಂತಗಳು ತಾತ್ವಿಕವಾಗಿ (ideologically) ಒಪ್ಪಿದ್ದವು.
ವೈಚಾರಿಕತೆಯ ಮೂಲಕ ನಮ್ಮ ಸುತ್ತಮುತ್ತಲಿನ ವಿದ್ಯಮಾನವನ್ನು (ಅಂದರೆ ವಾಸ್ತವವನ್ನು) ಯಥಾವತ್ತಾಗಿ ಗ್ರಹಿಸಲು ಸಾಧ್ಯ ಎಂಬುದು ಇದರ ಮೂಲ ತಳಹದಿಯಾಗಿತ್ತು. ಪ್ರತಿಯೊಬ್ಬ ವ್ಯಕ್ತಿ ಬೇರೆಬೇರೆಯಾಗಿ ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಬಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಸಾರ್ವಜನಿಕ ವಲಯದಲ್ಲಿ (public sphere) ಚರ್ಚೆಗಿಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಚರ್ಚೆಯ ತಳಹದಿ rationality. ವೈಯಕ್ತಿಕ ಆಸೆ, ಆಕಾಂಕ್ಷೆಗಳು ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ (liberty, equality, fraternity) ದಾರಿ ಮಾಡಿಕೊಡಬೇಕು. ನಾವು ಸ್ವತಂತ್ರರು, ನಮಗಿಷ್ಟ ಬಂದಂತೆ ನಾವಿರಹುದು, ಆದರೆ ಅದು ಇನ್ನೊಬ್ಬರ ಸ್ವಾತಂತ್ರ್ಯಹರಣ ಮಾಡಬಾರದು, ಮಾಡಿದರೆ ಅದು ಸಮಾನತೆ ಮತ್ತು ಭಾತೃತ್ವ ತತ್ವದ ಉಲ್ಲಂಘನೆಯಾಗುತ್ತದೆ.
ಇದನ್ನು ಸ್ಥೂಲವಾಗಿ ಆಧುನಿಕತೆಯ ಪ್ರಮುಖ ಲಕ್ಷಣಗಳು ಎಂದು ಭಾವಿಸಬಹುದು. ಇದನ್ನು ಸಾಮಾನ್ಯವಾಗಿ ಆಧುನಿಕತೆಯ ತಾತ್ವಿಕತೆ ಎಂದು ಒಪ್ಪಲಾಗಿದೆ. ಆದರೆ ಇದು ಅದರಲ್ಲಿನ ಉದಾರವಾದಿ ಮಾನವತಾವಾದಿ ಸಿದ್ಧಾಂತ (ಲಿಬೆರಲ್ humanism) ಎಂಬುದು ಮಾತ್ರ ಎನ್ನುವುದನ್ನು ಸಾಮಾನ್ಯವಾಗಿ ಮರೆಯಲಾಗುತ್ತದೆ. ಇದು ಆಧುನಿಕತೆಯ ಹಲವು ಸಿದ್ಧಾಂತಗಳಲ್ಲಿ ಒಂದು ಮಾತ್ರ. ಇದರಷ್ಟೇ ಮಹತ್ವವಾದ ಮತ್ತೊಂದು ಆಧುನಿಕ ಸಿದ್ಧಾಂತ ಎಂದರೆ, ಮಾರ್ಕ್ಸ್‌ವಾದಿ ಸಿದ್ಧಾಂತ. ಆಧುನಿಕತೆಯ ಉದಾರವಾದಿ ಮಾನವತಾವಾದಿ ಅವತಾರವು ಬಂಡವಾಳಶಾಹಿಯನ್ನು ಒಪ್ಪುತ್ತದೆ, ಖಾಸಗಿ ಆಸ್ತಿಯ ಹಕ್ಕನ್ನು ಪ್ರತಿಪಾದಿಸುತ್ತದೆ. ಆಧುನಿಕತೆಯ ತಾತ್ವಿಕತೆಗೂ ಬಂಡವಾಳಶಾಹಿಯ ಉಗಮಕ್ಕೂ ಸಂಬಂಧವಿದೆ. ಯೂರೋಪಿನ ಊಳಿಗ-ಮಾನ್ಯ ವ್ಯವಸ್ಥೆಯಿಂದ ಗುಲಾಮರನ್ನು ಬಿಡಿಸುವುದು ಬಂಡವಾಳಶಾಹಿಗೆ ಅಗತ್ಯವಿತ್ತು. ಹಾಗೆಯೇ ಹಳೆಯ ವ್ಯವಸ್ಥೆಯನ್ನು ಸಮರ್ಥಿಸುವ ಧರ್ಮವನ್ನು ಸುಧಾರಿಸಿ (reform), ಧರ್ಮವನ್ನು ರಾಜಕೀಯ ಮತ್ತು ಮಾರುಕಟ್ಟೆಯಿಂದ ದೂರವಿರಿಸುವುದು ಅದಕ್ಕೆ ಅಗತ್ಯವಿತ್ತು. ಅದು ಬೇರೆಯದೇ ಆದ ಕಥೆ, ಸದ್ಯಕ್ಕೆ ಇಲ್ಲಿ ಬೇಡ.
ಈ ರೀತಿಯ ಆಧುನಿಕತೆಯ ಒಡಲಲ್ಲೇ ಬಂಡವಾಳಶಾಹಿಯನ್ನು ವಿರೋಧಿಸಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳನ್ನು ಪ್ರತಿಪಾದಿಸುವ ಮಾರ್ಕ್ಸ್‌ವಾದಿ ಸಿದ್ಧಾಂತ ಉಗಮಗೊಂಡಿತು. ನಮ್ಮ ಸುತ್ತಲಿನ ಸಮಾಜವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಲು ವೈಚಾರಿಕತೆಯನ್ನು ಇದು ಪ್ರತಿಪಾದಿಸಿದರೂ, ಅದನ್ನು ಬದಲಾಯಿಸುವಲ್ಲಿ ಕೆಲವೊಮ್ಮೆ ಹಿಂಸೆ ಅನಿವಾರ್ಯ ಎನ್ನುತ್ತದೆ ಈ ವಾದ. ಸಮಾಜ, ವರ್ಗದ ಆಧಾರದಲ್ಲಿ ಶ್ರೇಣೀಕೃತಗೊಂಡಿದೆ, ಮೇಲಿನ ಶ್ರೇಣಿಯಲ್ಲಿನ ವರ್ಗದವರು ತಮ್ಮ ಸವಲತ್ತುಗಳನ್ನು ಸುಲಭವಾಗಿ ಬಿಟ್ಟುಕೊಡಲಾರರು, ಅವರು ಬಿಟ್ಟು ಕೊಡದ ಹೊರತು ನಿಜವಾದ ಸಮಾನತೆ (ಆರ್ಥಿಕ ಸಮಾನತೆ) ದೊರೆಯದು. ಆದ್ದರಿಂದ ಕೆಲವೊಮ್ಮೆ ಆರ್ಥಿಕ ಸಮಾನತೆ ತರಲು ಹಿಂಸೆ ಅನಿವಾರ್ಯ ಎಂದು ಇದು ವಾದಿಸುತ್ತದೆ. ನಮ್ಮ ಸುತ್ತಲಿನ ಸಮಾಜವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅದನ್ನು ಬದಲಾಯಿಸಲು ನಡೆದಿರುವ ಬಹುಪಾಲು ಸಾಂಘಿಕ ಹೋರಾಟಗಳಲ್ಲಿ ಈ ಸಿದ್ಧಾಂತದ್ದೇ ಸಿಂಹಪಾಲು. ಇದರರ್ಥ ಉದಾರ ಮಾನವತಾವಾದಿ ಸಿದ್ಧಾಂತ ಸಾಂಘಿಕ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿಲ್ಲ ಎಂದೇನಲ್ಲ. ಆದರೆ ಈ ಹೋರಾಟಗಳು, ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಒತ್ತಡ ಗುಂಪುಗಳಾಗಿ (preassure groups) ಕಾರ್ಯನಿರ್ವಹಿಸುತ್ತವೆ. ಇವುಗಳು ಮುಖ್ಯವಾಗಿ ರಾಷ್ಟ್ರಪ್ರಭುತ್ವವನ್ನು (Nation-state) ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತವೆ. ಇಲ್ಲಿ ಆರ್ಥಿಕ ಅಸಮಾನತೆ ಅಥವಾ ಇತರೆ ರೀತಿಯ ಅಸಮಾನತೆಗಳನ್ನು ನಿವಾರಿಸುವ ಕೆಲಸ ರಾಷ್ಟ್ರಪ್ರಭುತ್ವದ್ದು. ಮಹಿಳಾ ಚಳುವಳಿ ಯೂರೋಪಿನಲ್ಲಿ ಉಗಮವಾಗಿದ್ದೇ ಈ ಹಿನ್ನಲೆಯಲ್ಲಿ. ಪ್ರಜಾಪ್ರಭುತ್ವದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕೆಂದು ರಾಷ್ಟ್ರಪ್ರಭುತ್ವವನ್ನು ಒತ್ತಾಯಿಸುವುದು ಈ ಚಳುವಳಿಯ ಮುಖ್ಯ ಗುರಿಯಾಗಿತ್ತು.
ಭಾರತದ ಸಂದರ್ಭದಲ್ಲೂ ನಾವು ಮೇಲಿನೆರಡೂ ರೀತಿಯ, ಸಮಾಜವನ್ನು ಗ್ರಹಿಸುವ ಅರ್ಥ ಮಾಡಿಕೊಂಡು ಅದನ್ನು ಬದಲಾಯಿಸುವ, ಸಾಂಘಿಕ ಪ್ರಯತ್ನಗಳನ್ನು ಕಾಣಬಹುದು. ಉದಾರವಾದಿ ಮಾನವತಾವಾದಿ ಸಿದ್ಧಾಂತವನ್ನು ಬಳಸಿ ರಾಷ್ಟ್ರಪ್ರಭುತ್ವವನ್ನು ಒತ್ತಾಯಿಸುವ ಚಳುವಳಿಗಳೂ ಇವೆ. ಇವುಗಳು ಆಧುನಿಕತೆಯ ತಾತ್ವಿಕತೆಯನ್ನೇ ಮುಂದುಮಾಡಿ, ಆಧುನಿಕ ರಾಷ್ಟ್ರಪ್ರಭುತ್ವಗಳ ಘೋಷಿತ ಉದ್ಧೇಶಗಳಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳಿಗೆ ತಕ್ಕಂತೆ ಸರಿಯಾಗಿ ನಡೆದುಕೊಳ್ಳುವುದು ರಾಷ್ಟ್ರಪ್ರಭುತ್ವಗಳ ಕರ್ತವ್ಯ ಎಂದು ಹೇಳುತ್ತವೆ. ಹಾಗೆಯೇ ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರೇರಿತವಾದ ಸಾಂಘಿಕ ಹೋರಾಟಗಳೂ ಭಾರತದಲ್ಲಿ ಕಾಣಬಹುದು. ಇವುಗಳು ಭಾರತದ ರಾಷ್ಟ್ರಪ್ರಭುತ್ವವನ್ನು ಬಂಡವಾಳಶಾಹಿ ಪ್ರಣೀತವೆಂದು ವಾದಿಸಿ, ಪ್ರೊಲೆಟೇರಿಯಟ್ (proletariat) ಪ್ರಭುತ್ವವನ್ನು ಸ್ಥಾಪಿಸಬೇಕೆಂದು ವಾದಿಸುತ್ತವೆ. ಆದರೆ ಇದು ಸಿದ್ಧಾಂತಗಳ ಕಥೆ. ಚಳುವಳಿಗಳನ್ನು ಪರಿಗಣಿಸಿದರೆ ಇವುಗಳ ನಡುವಿನ ವಿಭಿನ್ನ ಬೆರೆತಗಳ ತಾತ್ವಿಕತೆಯನ್ನು ನಾವು ಭಾರತದಲ್ಲಿ ಕಾಣಬಹುದು. ಉದಾಹರಣೆಗೆ, ಕರ್ನಾಟಕದ ದಲಿತ ಚಳುವಳಿಯನ್ನು ಗಮನಿಸಿದರೆ, ಅದರ ಘೋಷಿತ ತಾತ್ವಿಕತೆಯಲ್ಲಿ ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ, ಮಾರ್ಕ್ಸ್, ಪೆರಿಯಾರ್‌ರೆಲ್ಲರ ತತ್ವವೂ ಕಾಣುತ್ತದೆ. ಹಾಗೆಯೇ ಪ್ರಜಾಪ್ರಭುತ್ವದಲ್ಲಿನ ಬೂರ್ಜ್ವಾಪ್ರಭುತ್ವವನ್ನು (bourgeois state) ಒಪ್ಪಿ ಹೋರಾಟ ನಡೆಸುತ್ತಿರುವ ಮಾರ್ಕ್ಸ್‌ವಾದಿ ಪಕ್ಷಗಳು ಮತ್ತು ಚಳುವಳಿಗಳಿವೆ, ಬೂರ್ಜ್ವಾಪ್ರಭುತ್ವವನ್ನು ಧಿಕ್ಕರಿಸುವ ಮಾರ್ಕ್ಸ್‌ವಾದಿ ಚಳುವಳಿಗಳಿವೆ. ಆದರೆ ಈ ಎಲ್ಲಾ ಚಳುವಳಿಗಳೂ ಆಧುನಿಕವಾದ ಸಿದ್ಧಾಂತಗಳಿಂದಲೇ ಪ್ರೇರಣೆ ಪಡೆದು ನಡೆದಿರುವ ಸಾಂಘಿಕ ಪ್ರಯತ್ನಗಳು. ಇದರಲ್ಲಿ, ಗಾಂಧಿ ಮಾತ್ರ ಆಧುನಿಕತೆ ವಿರೋಧಿ ಸಿದ್ಧಾಂತವನ್ನು ರೂಪಿಸಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನವೂ ಕೂಡ ಆಧುನಿಕತೆಯ ಸಂದರ್ಭದಲ್ಲೇ, ಆಧುನಿಕತೆಯ ಆಯ್ದ ಅಂಶಗಳನ್ನು ಕೂಡಿಸಿದ ಮತ್ತು ಅದೇ ಕಾಲಕ್ಕೆ, ಸಂಪ್ರದಾಯವೆಂದು ಅವರು ಭಾವಿಸುವ ಅಂಶಗಳನ್ನು ಆಧುನಿಕತೆಯ ಮೌಲ್ಯಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿದ ಪ್ರಯತ್ನವೇ ಆಗಿದೆಯೇ ಹೊರತು ಆಧುನಿಕತೆ ವಿರೋಧಿ ಎಂದು ಭಾವಿಸಲು ಸಾಧ್ಯವಿಲ್ಲ.
ಆದರೆ, ಈಗ ಆಧುನಿಕತೆಯ ತಾತ್ವಿಕತೆ ಮತ್ತು ಆಧುನಿಕ ವಿಚಾರಗಳ ಮೂಲಭೂತ ತತ್ವಗಳನ್ನು (fundamental principles) ಆಧುನಿಕೋತ್ತರ ವಿಚಾರಧಾರೆ ಪ್ರಶ್ನೆ ಮಾಡುತ್ತಿರುವುದರಿಂದ ಒಂದು ರೀತಿಯ ಆತಂಕ ಕೆಲವರಿಗೆ ಪ್ರಾರಂಭವಾಗಿದೆ. ಉದಾಹರಣೆಗೆ ಹೇಳುವುದಾದರೆ ಫೂಕೋನ ವ್ಯಕ್ತಿತ್ವ ಪರಿಕಲ್ಪನೆಯನ್ನು ಮತ್ತು ಸ್ವ ಪರಿಕಲ್ಪನೆಯನ್ನು ತೆಗೆದುಕೊಳ್ಳಬಹುದು. ಆಧುನಿಕತೆ ವ್ಯಕ್ತಿಯನ್ನು ವೈಚಾರಿಕತೆಯಿಂದ ಕೂಡಿದ ಸಮಗ್ರ ವ್ಯಕ್ತಿತ್ವವಾಗಿ ಭಾವಿಸಿತು, ಮತ್ತು ತಮ್ಮ ನಿರ್ಧಾರಗಳನ್ನು ಅವರು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯ ಎಂದು ಭಾವಿಸಿತು. ಈ ಅವಕಾಶವನ್ನು ರಾಷ್ಟ್ರಪ್ರಭುತ್ವ ಪ್ರತಿಯೊಬ್ಬ ವ್ಯಕ್ತಿಗೂ (ಪ್ರಜೆ, ನಾಗರಿಕ) ನೀಡಬೇಕು, ಅವುಗಳನ್ನು ಹತ್ತಿಕ್ಕಬಾರದು ಎಂದಿತು. ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು ಹಾಗು ಮಾನವ ಹಕ್ಕುಗಳ ಪರಿಕಲ್ಪನೆ ಈ ನಿಟ್ಟಿನಲ್ಲೇ ಹುಟ್ಟಿರುವುದು. ನಮ್ಮ ಬಹುತೇಕ ಚಳುವಳಿಗಳು ಸಂವಿಧಾನದ ಈ ಹಕ್ಕುಗಳನ್ನು, ಹಾಗು ಅದರಲ್ಲೇ ದತ್ತವಾಗಿರುವ ಸಮಾನತೆಯ ಪರಿಕಲ್ಪನೆಯ ಹಿನ್ನಲೆಯಲ್ಲೇ ಹುಟ್ಟಿರುವುದು. ಈ ಹಕ್ಕು ಗಳು ಸರಿಯಾಗಿ ಜಾರಿಯಾಗಿಲ್ಲ, ಸರಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವುದು ಈ ಚಳುವಳಿಗಳ ಬಹಳ ಮುಖ್ಯ ಅಂಶವಾಗಿರುತ್ತದೆ. ಆದರೆ ಫೂಕೋನ ವ್ಯಕ್ತಿತ್ವದ ವ್ಯಾಖ್ಯಾನ ವ್ಯಕ್ತಿಯನ್ನು ಆಧರಿಸಿಲ್ಲ. ವ್ಯಕ್ತಿತ್ವ ಎನ್ನುವುದು ವಿಚಾರಧಾರೆ(discourse)ಯ ಸೃಷ್ಟಿ. ಯಾರು ಬೇಕಾದರು, ಯಾವುದೇ ವ್ಯಕ್ತಿತ್ವವನ್ನು ಧಾರಣೆ ಮಾಡಬಹುದು. ನಮ್ಮ ಸ್ವ ಎನ್ನುವುದನ್ನು ವಿಚಾರಧಾರೆಗಳು ಸೃಷ್ಟಿಸಿರುವುದರಿಂದ ಅದು ಸಮಗ್ರವಾದದ್ದಲ್ಲ, ಏಕತ್ರವಾದದ್ದಲ್ಲ, ಛಿದ್ರವಾದದ್ದು. ನಮ್ಮ ಸ್ವತಂತ್ರ ವಿಚಾರಗಳು ಎಂದು ನಾವು ಭಾವಿಸಿರುವುದು, ಚಾರಿತ್ರಿಕ ಸಂದರ್ಭದಲ್ಲಿ (ಫೂಕೋ genealogyಎಂಬ ಪದವನ್ನು ಬಳಸುತ್ತಾನೆ, ಚಾರಿತ್ರಿಕಕ್ಕೂ ಈ ಪರಿಕಲ್ಪನೆಗೂ ವ್ಯತ್ಯಾಸವನ್ನು ಅತ ಪರಿಕಲ್ಪಿಸಿಕೊಳ್ಳುತ್ತಾನೆ, ಆದರೂ ಇಲ್ಲಿ ಅರ್ಥ ಸಂವಹನಕ್ಕಾಗಿ ತಪ್ಪಾದರೂ ಪರಿಚಿತ ಪರಿಕಲ್ಪನೆಯನ್ನೇ ನಾನು ಬಳಸಿದ್ದೇನೆ)ರೂಪುಗೊಂಡು ನಮಗೆ ದತ್ತವಾಗಿರುವಂಥದ್ದೂ ಎಂಬುದು ಆತನ ವಾದ. ವ್ಯಕ್ತಿಯ ವೈಚಾರಿಕತೆಯನ್ನೇ ಇದು ಪ್ರಶ್ನಿಸುತ್ತದೆ. ನಮ್ಮ ವ್ಯಕ್ತಿತ್ವಗಳ ರೂಪುಗೊಳ್ಳುವಿಕೆಯಲ್ಲಿ ವ್ಯಕ್ತಿಗಳ ಪಾತ್ರ ಏನೂ ಇಲ್ಲ ಎಂಬುದು, ವ್ಯಕ್ತಿಗಳು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಂಡು, ಬದಲಾಯಿಸಲು ಸಾಧ್ಯ ಎಂಬ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ವೈಚಾರಿಕತೆಯನ್ನೇ ಆತ ಎನ್‌ಲೈಟನ್‌ಮೆಂಟ್‌ನ (enlightenment) ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಇದು ಅವೈಚಾರಿಕ ಎಂದು ಕೆಲವು ರೀತಿಯ eನ ಪರಂಪರೆಗಳನ್ನು ಪಕ್ಕಕ್ಕೆ ದೂಡಿದೆ ಎಂಬುದು ಆಥನ ವಾದ. ವೈಚಾರಿಕತೆ ಎನ್ನುವ ಆಕೃತಿಯೇ ಚಾರಿತ್ರಿಕ ಸನ್ನಿವೇಶದಲ್ಲಿ ಆಧುನಿಕತೆಯನ್ನು ಸಮರ್ಥಿಸುವ ವಿಚಾರಧಾರೆಯ ಪರಿಣಾಮ ಎನ್ನುವುದು ಆತನ ವಾದ. ಇದು ವ್ಯಕ್ತಿಯನ್ನೇ ನಿರ್ವಚಿಸುವುದರಿಂದ, ವ್ಯಕ್ತಿ ಎನ್ನುವುದು ಸತ್ತಂತಾಗುತ್ತದೆ. ಆತನ ಬಹುಪಾಲು ಸಂಶೋಧನೆಗಳು ವಿಚಾರಧಾರೆಗಳು ಹೇಗೆ ಯಾವ ಯಾವ ವಿಧಾನಗಳಿಂದ ನಮ್ಮ ಸ್ವ (self)ವನ್ನು ರೂಪಿಸಿದೆ ಎನ್ನುವುದಕ್ಕೆ ಸೀಮಿತವಾಗಿದೆ (technologies of production of self). ಆತ ನೀಷೆಯ Nietzsche) god is dead ಎಂಬುದನ್ನು man is dead ಎಂದು ವಿಸ್ತರಿಸಿದ. ಇದೇ ಹಿನ್ನಲೆಯಲ್ಲೇ ಆತ ಲೇಖಕ (author-ಕರ್ತೃ) ಪರಿಕಲ್ಪನೆಯನ್ನೇ ನಿರಾಕರಿಸುತ್ತಾನೆ. ವ್ಯಕ್ತಿ ಎಂಬುದೇ ಸ್ವತಂತ್ರವಲ್ಲ ಎಂದಾದ ಮೇಲೆ, ವ್ಯಕ್ತಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ, ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೊಸ ಸಿದ್ಧಾಂತಗಳ ಈ ನಿಲುವೇ ಪ್ರಸ್ತುತ ಆತಂಕಕ್ಕೇ ಎಡೆ ಮಾಡಿಕೊಟ್ಟಿರುವುದು.
ಇದನ್ನು ಉದಾಹರಣೆಯೊಂದಿಗೆ ವಿವರಿಸಿದರೆ ಸ್ಪಷ್ಟವಾಗಬಹುದು. ಬ್ರಾಹ್ಮಣಶಾಹಿ ಹೇಗೆ ಪ್ರತಿಭೆ ಎನ್ನುವ ಪರಿಕಲ್ಪನೆಯನ್ನು ರೂಪಿಸಿದೆ, ಅದನ್ನು ಒಂದು ಜಾತಿಯೊಂದಿಗೆ ಸಮೀಕರಿಸಿ ನಮ್ಮೆಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿದೆ ಎನ್ನುವುದನ್ನು ವಿಶ್ಲೇಷಿಸುವುದು ಫೂಕೋನ ಸಿದ್ಧಾಂತದಿಂದ ಸಾಧ್ಯ. ಹೇಗೆ ಇದು ಬ್ರಾಹ್ಮಣಶಾಹಿಯ ಅಧಿಕಾರವನ್ನು ಮುಂದುವರೆಸುವಂತಹ ಸತ್ಯವಾಗಿ, ತಿಳುವಳಿಕೆ ರೂಪುಗೊಂಡಿದೆ ಎನ್ನುವುದನ್ನು ವಿವರಿಸಲು ಸಾಧ್ಯ. ಈ ಮುಖ ನಮ್ಮ ಪ್ರಮುಖ ಚಳುವಳಿಗಳಿಗೆ ಆತಂಕಕಾರಿಯೇನಲ್ಲ, ಬದಲಾಗಿ ಪೂರಕವಾಗಿ ಕೆಲಸ ಮಾಡುತ್ತದೆ. ಇದರ ಇನ್ನೊಂದು ಮುಖವೂ ಇದೆ. ಇದೇ ಉದಾಹರಣೆಯನ್ನು ವಿಸ್ತರಿಸಿದರೆ ಅದು ಸ್ಪಷ್ಟವಾಗುತ್ತದೆ. ದಲಿತ ಚಳುವಳಿ ದಲಿತ ಸ್ವ ಎನ್ನುವುದು ಇದೆ. ಅದು ಶತಶತಮಾನಗಳಿಂದ ಶೋಷಣೆಗೊಳ್ಳುತ್ತಾ ಬಂದಿದೆ. ಈಗ ಅದು ಎಚ್ಚರಗೊಂಡಿದೆ. ತನ್ನ ಅನುಭವಗಳ ಹಿನ್ನಲೆಯಲ್ಲಿ ತನ್ನ ಮಾತನ್ನು ಕೇಳು ಎನ್ನುತ್ತಿದೆ ಎನ್ನುವುದನ್ನೂ ಒಂದು ವಿಚಾರಧಾರೆಯ ಪರಿಣಾಮವಾಗಿ ರೂಪುಗೊಂಡಿದ್ದು, ದಲಿತ ಸ್ವ ಎನ್ನುವುದು ಇಲ್ಲ, ಸ್ವ ಎನ್ನುವುದು ಸಮಗ್ರವಾದದ್ದಲ್ಲ, ಛಿದ್ರವಾದದ್ದು ಎಂದು ಫೂಕೋನ ವಿಚಾರಗಳ ಹಿನ್ನಲೆಯಲ್ಲಿ ನಿರೂಪಿಸಲು ಸಾಧ್ಯ. ಈ ಮುಖವೇ ಪ್ರಗತಿಪರ ಎಂದು ಕರೆಸಿಕೊಳ್ಳುವ ಚಳುವಳಿಗಳಿಗೆ ಆತಂಕಕಾರಿಯಾದದ್ದು. ಪ್ರಸ್ತುತ ಆಧುನಿಕತೆಯ ವೈಚಾರಿಕತೆಯ ಹಿನ್ನಲೆಯಲ್ಲಿ ತಮ್ಮ ಚಳುವಳಿಗಳನ್ನು ನಿರ್ವಹಿಸುತ್ತಿರುವವರಿಗೆ, ವೈಚಾರಿಕತೆ ಎನ್ನುವುದೇ ಇಲ್ಲ ಎಂದಾಗ, ಆಧುನಿಕತೆ ಸರಿಯಲ್ಲ ಎಂದಾಗ ಯಾವ ಆತಂಕ ಉಂಟಾಗಬಹುದು ಅದೇ ಈಗ ಆಗಿರುವುದು.
ಮತ್ತೊಬ್ಬ ಸಮಕಾಲೀನ ಪ್ರಮುಖ ಸಿದ್ಧಾಂತಿಯಾದ ಡೆರಿಡಾನ ವಿಚಾರಗಳನ್ನು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು. ಡೆರಿಡಾ ಭಾಷೆಯನ್ನು ವಿಚಾರದ/ಅರ್ಥದ ವಾಹಕ ಎಂದು ನೋಡುವುದಿಲ್ಲ. ಬದಲಾಗಿ ನಮ್ಮ ವಾಸ್ತವವನ್ನು ರೂಪಿಸುವ ಪರಿಕರವಾಗಿ ನೋಡುತ್ತಾನೆ. ವಾಸ್ತವವೆನ್ನುವುದನ್ನು ನಾವು ತಿಳಿಯಲೇ ಸಾಧ್ಯವಿಲ್ಲ, ನಮ್ಮ ಭಾಷೆ ಏನನ್ನು ನಮಗೆ ತಿಳಿಸುತ್ತದೋ ಅದೇ ವಾಸ್ತವ ಎಂದು ನಾವು ಭಾವಿಸುತ್ತೇವೆ. ಭಾಷೆ ಒಂದು ಆಟ, ಅದು ನಿರ್ದಿಷ್ಟವಾದುದಲ್ಲವಾದ್ದರಿಂದ ಅದನ್ನು ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿ ವಾಸ್ತವವನ್ನು ಬದಲಾಯಿಸಲು ಸಾಧ್ಯ ಎಂದು ಆತ ವಾದಿಸುತ್ತಾನೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಬದಲಾಯಿಸುವ ಕ್ರಿಯೆಯನ್ನು ಭಾಷೆಯ ಮಟ್ಟಕ್ಕೆ, ಆಟದ ಮಟ್ಟಕ್ಕೆ ಇಳಿಸಿದರೆ ಹೇಗೆ ಎನ್ನುವ ಆತಂಕ ಸಹಜವಾಗೇ ಇದರಿಂದ ಮೂಡುತ್ತದೆ. ವಾಸ್ತವವೆನ್ನುವುದನ್ನು ತಿಳಿಯಲು ಸಾಧ್ಯವಿಲ್ಲ ಎನ್ನುವುದು, ಶೋಷಣೆ ಇದೆ ಅದನ್ನು ಹೋಗಲಾಡಿಸಬೇಕು ಎನ್ನುವವರಿಗೆ ಆತಂಕಕಾರಿಯಾಗುತ್ತದೆ. ಡೆರಿಡಾನ ಸಿದ್ಧಾಂತವನ್ನು ಕೂಡ ಹೇಗೆ ಶೋಷಿತರನ್ನು ಶೋಷಿತ ವ್ಯವಸ್ಥೆಯ ಪರವಾಗಿರುವಂತೆ, ಅದನ್ನು ನಮ್ಮದು ಎನ್ನುವಂತೆ ನೋಡಲು, ಅರ್ಥಮಾಡಿಕೊಳ್ಳಲು ಭಾಷೆಯ ಮೂಲಕ ಸೃಷ್ಟಿಸಲಾಗಿದೆ ಎಂದು ಪ್ರಸ್ತುತದ ಯಾಜಮಾನ್ಯ ವ್ಯವಸ್ಥೆಯನ್ನು ವಿಶ್ಲೇಷಿಸಲು ಬಳಸಿಕೊಳ್ಳಲು ಸಾಧ್ಯ. ಹಾಗಾದಾಗ ಅದು ಆತಂಕ ಮೂಡಿಸುವ ಬದಲು, ಪ್ರಸ್ತುತದ ಪ್ರಗತಿಪರ ಚಳುವಳಿಗೆ ಪೂರಕವಾದ ಸಿದ್ಧಾಂತವಾಗುತ್ತದೆ.
ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ, ಈ ಹೊಸ ಸಿದ್ಧಾಂತಗಳು ಕತ್ತಿಯಂತೆಯೂ, ಅದನ್ನು ಕಾಯಿ ಕತ್ತರಿಸಲು ಇಲ್ಲಾ ಬೇರೊಬ್ಬರನ್ನು ಕತ್ತರಿಸಲು ಬಳಸಿಕೊಳ್ಳಲು ಸಾಧ್ಯ ಎಂದು ನಾನು ಹೇಳುತ್ತಿಲ್ಲ. ಇಲ್ಲಿಯೇ ನಾನು ಮೊದಲಿಗೆ ಪ್ರಸ್ತಾಪಿಸಿದ ಆಧುನಿಕೋತ್ತರ ಮತ್ತು ಸಂರಚನೋತ್ತರ ಸಿದ್ಧಾಂತಗಳ ನಡುವಿನ ವ್ಯತ್ಯಾಸ ಮುಖ್ಯವಾಗುವುದು. ಇವುಗಳನ್ನು ಸಾಮಾನ್ಯವಾಗಿ interchangableಆಗಿ ಬಳಸಲಾಗುತ್ತದೆ. ಆದರೆ ನಾನು ಮೇಲೆ ಉದಾಹರಿಸಿದ ಫೂಕೋನ ಸಿದ್ಧಾಂತಗಳು ಮತ್ತು ಡೆರಿಡಾನ ಸಿದ್ಧಾಂತಗಳನ್ನು ನಾನು ಸಂರಚನೋತ್ತರ ಸಿದ್ಧಾಂತಗಳನ್ನಾಗಿ ನೋಡುತ್ತೇನೆ. ಆಧುನಿಕೋತ್ತರ ಸಿದ್ಧಾಂತಗಳ ಭಾಗವೇ ಆದರೂ ಅವುಗಳನ್ನು ಬೇರೆಯಾಗಿ ನೋಡಬೇಕೆಂಬುದು ನನ್ನ ವಾದ. ಫೂಕೋ ಆಧುನಿಕತೆಯ ಸಂದರ್ಭದ ತಿಳುವಳಿಕೆ ಮತ್ತು ಅಧಿಕಾರದ ಸಂಬಂಧಗಳನ್ನು ವಿಶ್ಲೇಷಣೆ ಮಾಡಿದ್ದಾನೆ, ಅವುಗಳು ಹೇಗೆ ವ್ಯಕ್ತಿ ಎಂಬ ಪರಿಕಲ್ಪನೆಯನ್ನು ಆಧುನಿಕತೆಯ ಸಂದರ್ಭದಲ್ಲಿ ಸೃಷ್ಟಿಸಿವೆ, ಅದಕ್ಕೂ ಆ ಕಾಲದ ಪ್ರಬಲ ವಿಚಾರಧಾರೆಗೂ ಇರುವ ಸಂಬಂಧ ಏನು ಎನ್ನುವುದನ್ನು ವಿಶ್ಲೇಷಿದ್ದಾನೆ. ಇದನ್ನು ವಿಸ್ತರಿಸಿ ಆಧುನಿಕತೆ ವಿರೋಧಿಸುವ ಸಿದ್ಧಾಂತಗಳು ರೂಪುಗೊಂಡಿವೆ. ಆಧುನಿಕತೆಯ ಸಂದರ್ಭವನ್ನು ಮಾತ್ರ ಫೂಕೋ ವಿಶ್ಲೇಷಿಸಿದ್ದರೂ ಪ್ರಸ್ತುತದ ಪರಿಕಲ್ಪನೆಯ ಜೀನಿಯಾಲಜಿಗಳನ್ನು ಟ್ರೇಸ್ ಮಾಡುವಾಗ ಆತ ಆಧುನಿಕ ಪೂರ್ವ ಸಂದರ್ಭದಲ್ಲಿ ಅಡ್ಡಾಡುತ್ತಾನೆ. ಆಧುನಿಕ ಪೂರ್ವದಲ್ಲಿದ್ದ ಪ್ರಬಲ ವಿಚಾರಧಾರೆ, ಸೃಷ್ಟಿಸಿದ ರೂಪಿಸಿದ ಪರಿಕಲ್ಪನೆಗಳನ್ನು ಮತ್ತು ವ್ಯಕ್ತಿತ್ವಗಳನ್ನೇನೂ ಆತ ಒಳ್ಳೆಯದು ಎಂದು ಹೇಳುವುದಿಲ್ಲ. ಆತನ ಸೈದ್ಧಾಂತಿಕ ವಿಚಾರಗಳನ್ನು ನಾವು ಆಧುನಿಕ ವಿಚಾರಧಾರೆ, ಆಧುನಿಕಪೂರ್ವ ವಿಚಾರಧಾರೆ ಮತ್ತು ಆಧುನಿಕೋತ್ತರ ವಿಚಾರಧಾರೆಗೂ ಅನ್ವಯಿಸಿ ವಿಶ್ಲೇಷಿಸಿ ಅವುಗಳು ರೂಪಿಸುತ್ತಿರುವ ವ್ಯಕ್ತಿತ್ವ, ಸ್ವ ತಿಳುವಳಿಕೆಗೂ ಅಧಿಕಾರಕ್ಕೂ ಇರುವ ಸಂಬಂಧವನ್ನು ತೋರಿಸಬಹುದು. ಆ ಅಧಿಕಾರ ಸಂಬಂಧಗಳನ್ನು ಬದಲಾಯಿಸಿ, ಬೇರೆ ರೀತಿಯ ಸಂಬಂಧಗಳನ್ನು ಸೃಷ್ಟಿಸಲು ಅಗತ್ಯವಿರುವ ತಿಳುವಳಿಕೆಯ ಉತ್ಪಾದನೆ ಮತ್ತು ವಿಚಾರಧಾರೆಯ ಪ್ರಸರಣವನ್ನು ತೀವ್ರಗೊಳಿಸಬಹುದು. ಹೀಗೆ ಸಂರಚನೋತ್ತರ ಸಿದ್ಧಾಂತಗಳನ್ನು ಕೇವಲ ಆಧುನಿಕೋತ್ತರ ವಿಚಾರಧಾರೆಯ ಭಾಗವಾಗಿ ನೋಡದೆ, ಆಧುನಿಕೋತ್ತರ ಅಧಿಕಾರ ಸಂಬಂಧಗಳನ್ನು ಅನಾವರಣಗೊಳಿಸಲು ಬಳಸಬಹುದು. ಆದ್ದರಿಂದ ಸಂರಚನೋತ್ತರ ಸಿದ್ಧಾಂತಗಳನ್ನು ಪ್ರಸ್ತುತ ಸಂದರ್ಭದಲ್ಲಿ ಆಧುನಿಕೋತ್ತರ ರಚನೆಗಳನ್ನು ಒಡೆಯಲು, ಬದಲಾಯಿಸಲು ಸಾಧ್ಯವಿದೆ ಎನ್ನುವುದು ನನ್ನ ವಾದ.
ಈಗ ಆಧುನಿಕೋತ್ತರ ಸಿದ್ಧಾಂತ ಅಥವಾ ವಿಚಾರಧಾರೆ ಎಂದರೆ ಏನು ಎಂದು ನೋಡೋಣ. ಮೊದಲಿಗೆ ಆಧುನಿಕೋತ್ತರ ವಿಚಾರಧಾರೆ (ಪೋಸ್ಟ್-ಮಾಡರ್ನ್ ) ಮತ್ತು ಆಧುನಿಕೋತ್ತರವಾದ (postmodernism) ಇವುಗಳನ್ನು ಅರ್ಥ ಮಾಡಿಕೊಳ್ಳೋಣ. ಆಧುನಿಕೋತ್ತರವಾದ ಎನ್ನುವುದು, ನಾವು ನವ್ಯ ಎಂದು ಗುರುತಿಸುವ ಮಾಡರ್ನಿಸಂ ನಂತರದ ಬೆಳವಣಿಗೆ. ಮುಖ್ಯವಾಗಿ ಕಲೆ, ಸಾಹಿತ್ಯ ಇತ್ಯಾದಿ ಪ್ರಕಾರಗಳಲ್ಲಿ ಬೆಳೆದ ಒಂದು ಹೊಸ ವಾದ. ಮಾಡರ್ನಿಸಂಗೆ ವಿರುದ್ಧವಾದ, ಅಥವಾ ವಿರುದ್ಧ ಎನ್ನುವುದಕ್ಕಿಂತ ಭಿನ್ನವಾದ ಚಿಂತನೆಗಳು ಇವು. ನಾವು ಮಾಡರ್ನಿಸಂ ಬಗ್ಗೆ ತಲೆಕೆಡಿಸಿಕೊಳ್ಳದಂತೆ, ಪೋಸ್ಟ್‌ಮಾಡರ್ನಿಸಂ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಈ ಸಂದರ್ಭದಲ್ಲಿ. ನಾವು ಮುಖ್ಯವಾಗಿ ಯೋಚಿಸಬೇಕಾಗಿರುವುದು ಪೋಸ್ಟ್‌ಮಾಡರ್ನ್ ಡಿಸ್ಕೋರ್ಸ್ (ವಿಚಾರಧಾರೆ) ಕುರಿತು. ಇವುಗಳನ್ನು ಸ್ಥೂಲವಾಗಿ ಆಧುನಿಕೋತ್ತರ ಸಂದರ್ಭದ ವಿಚಾರಗಳು ಎನ್ನಬಹುದು. ಇದು ಆಧುನಿಕೋತ್ತರ ಸಂದರ್ಭ ಎಂದರೆ ಏನು? ಎಂಬ ಪ್ರಶ್ನೆಯನ್ನು ಮುಂದುಮಾಡುತ್ತವೆ. ಆಧುನಿಕತೆ ಎಂಬ ಪರಿಕಲ್ಪನೆಯನ್ನು ಬಳಸುವಂತೆ, ಇದನ್ನು ಆಧುನಿಕೋತ್ತರತೆ (postmodernity) ಅಥವಾ ಅತ್ಯಾಧುನಿಕತೆ ಎಂದು ಕರೆಯಬಹುದೇನೊ. ಪೋಸ್ಟ್‌ಮಾಡರ್ನಿಟಿ ಬಹಳ ಮುಖ್ಯವಾಗಿ ನಾವು ತಲೆಕೆಡಿಸಿಕೊಳ್ಳಬೇಕಾಗಿರುವುದು. ಇದೇ ಇಂದಿನ ನಮ್ಮ ಸಮಕಾಲೀನ ಸಂದರ್ಭದ ಅನೇಕ ತಲ್ಲಣಗಳಿಗೆ ಕಾರಣವಾಗಿರುವುದು, ಸಂರಚೋನತ್ತರ ಸಿದ್ಧಾಂತ ಅಥವಾ ಆಧುನಿಕೋತ್ತರವಾದ ಅಲ್ಲ.
ಆಧುನಿಕೋತ್ತರತೆ ಎನ್ನುವುದನ್ನು ನಾವು ಫ್ರೆಡರಿಕ್ ಜೇಮ್‌ಸನ್ ಎಂಬ ವಿದ್ವಾಂಸ ಗುರುತಿಸುವಂತೆ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ನನ್ನ ವಾದ. ಆತ ಅದನ್ನು ಲೇಟ್ ಲಾಜಿಕ್ ಆಫ್ ಕ್ಯಾಪಿಟಲಿಸಂ (Late Logic of Capitalism) ಎಂದು ವಿಶ್ಲೇಷಿಸುತ್ತಾನೆ. ಅಂದರೆ, ಬಂಡವಾಳಶಾಹಿಯ ಕೊನೆ ಬೆಳವಣಿಗೆಯ ತರ್ಕ ಎಂದು. ಇದನ್ನು ನಾವು ಸ್ಥೂಲವಾಗಿ ಹೀಗೆ ಅರ್ಥ ಮಾಡಿಕೊಳ್ಳಬಹುದು. ಆಧುನಿಕತೆಯು ಬಂಡವಾಳಶಾಹಿಯ ಉಗಮದ ಸಂದರ್ಭದಲ್ಲಿನ ಚಿಂತನೆಗಳು ಎಂದು ಹಿಂದೆ ಹೇಳಿದಂತೆ, ಬಂಡವಾಳಶಾಹಿ ಬೆಳೆದು ನಿಂತ ಸ್ಥಿತಿಯ ಸಂದರ್ಭವೇ, ಅತ್ಯಾಧುನಿಕತೆ. ಆಧುನಿಕತೆ, ವ್ಯಕ್ತಿ ವಿಶಿಷ್ಟವಾದವನ್ನು ಸಮರ್ಥಿಸಿದರೂ ಜೊತೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಎಂಬ ಪರಿಕಲ್ಪನೆಗಳನ್ನು ನೀಡಿತು. ಅಲ್ಲದೆ, ವ್ಯಕ್ತಿಯನ್ನು ರಾಷ್ಟ್ರಪ್ರಭುತ್ವ ಎಂಬ ಸಮಷ್ಟಿ ಪರಿಕಲ್ಪನೆಯಲ್ಲಿ ಕಟ್ಟಿ ಹಾಕಿತು. ವಸಾಹತುಶಾಹಿಯು ಬೆಳವಣಿಗೆಯ ಭಾಗವಾಗಿ ರೂಪುಗೊಂಡರು, ಕಾಲಾಂತರದಲ್ಲಿ ಆಧುನಿಕ ವಿಚಾರಗಳನ್ನು ತಲೆಗೆ ಹಚ್ಚಿಕೊಂಡ, ವಸಾಹತು ಪ್ರದೇಶಗಳ ಜನರು, ವಸಾಹತುಶಾಹಿಯನ್ನು ವಿರೋಧಿಸಿ ತಮ್ಮದೇ ಆದ ರಾಷ್ಟ್ರಪ್ರಭುತ್ವಗಳನ್ನು ಸೃಷ್ಟಿಸಿಕೊಂಡರು. ಈ ರಾಷ್ಟ್ರದ ಗಡಿಗಳು ಬಂಡವಾಳದ ಸುಗಮ ಚಲನೆಗೆ ಅಡ್ಡಿಯಾಗಿದ್ದವು. ನಮ್ಮ ದೇಶದ ಉದಾಹರಣೆ ನೀಡುವುದಾದರೆ, ವಿದೇಶಿ ಬಂಡವಾಳ ನಮ್ಮ ರಾಷ್ಟ್ರದಲ್ಲಿ ಬರುವುದು ಅಷ್ಟು ಸುಲಭವಾಗಿರಲಿಲ್ಲ, ಬಂದರೂ ಅದರ ಪಾಲು ಶೇ. ೪೯ಕ್ಕಿಂತ ಹೆಚ್ಚಿರಬಾರದೆಂದು ಕಂಡಿಶನ್ ಇತ್ತು. ಲೈಸನ್ಸ್ ಪಡೆಯುವುದು, ಪರ್‍ಮಿಶನ್ ಪಡೆಯುವುದು ಅಷ್ಟೇನೂ ಸುಲಭದ ಸಂಗತಿಯಾಗಿರಲಿಲ್ಲ. ಬಂಡವಾಳಶಾಹಿಯ ಸುಗಮ ಚಲನೆಗೆ ರಾಷ್ಟ್ರಪ್ರಭುತ್ವಗಳು ತಡೆಗೋಡೆಗಳಾಗಿದ್ದವು. ಇದು ಆಧುನಿಕತೆಯ ಕಥೆ. ಆದರೆ ಇಂದು ಸಂಗತಿ ಇದಲ್ಲ. ಬಂಡವಾಳಶಾಹಿ ರಾಷ್ಟ್ರದ ಗಡಿಗಳನ್ನು ಮೀರಿ ಸಂಚರಿಸತೊಡಗಿದೆ. ನಮ್ಮ ರಾಷ್ಟ್ರದ್ದೇ ಕಥೆ ಹೇಳುವುದಾದರೆ, ಲೈಸನ್ಸ್ ರಾಜ್, ಪರ್‍ಮಿಟ್ ರಾಜ್‌ಗಳು ಹೊರಟು ಹೋಗಿದೆ. ವಿದೇಶಿ ಬಂಡವಾಳ ಶೇ. ೪೯ಕ್ಕಿಂತ ಹೆಚ್ಚಿರಬಾರದು ಎಂಬುದು ಹೋಗಿ ಎಷ್ಟಾದರೂ ಇರಬಹುದು ಎಂದಾಗಿದೆ. ಅದು ಹೋಗಲಿ, ರಾಷ್ಟ್ರಪ್ರಭುತ್ವ ನಡೆಸುತ್ತಿದ್ದ ಎಷ್ಟೋ ಇಂಡಸ್ಟ್ರಿಗಳನ್ನು ವ್ಯವಸ್ಥಿತವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲಾಗುತ್ತಿದೆ. ಬಂಡವಾಳಶಾಹಿಯು ಇಂದು ಒಂದು ರಾಷ್ಟ್ರದ ಹೆಸರಿನಲ್ಲಿ ಅಡಿಯಲ್ಲಿ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ. ಎಲ್ಲವೂ ಮಲ್ಟಿನ್ಯಾಷನಲ್ ಅಥವಾ ಟ್ರಾನ್ಸ್‌ನ್ಯಾಷನಲ್ (multi-national, transnational). ಹೊಸ ರೀತಿಯ ತಂತ್ರeನವೂ ಕೂಡ ಇದಕ್ಕೆ ಸರಿಸಮಾನವಾಗಿ ಬೆಳೆದಿದೆ. ಮಾಹಿತಿ ತಂತ್ರeನದ ಬೆಳವಣಿಗೆ (ಅಂತರ್ಜಾಲ, ಇಂಟರ್‌ನೆಟ್) ಇತ್ಯಾದಿ ಬಂಡವಾಳದ ಸುಗಮ ಚಲನೆಗೆ ಕಾರಣಕರ್ತವಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಬ್ಯಾಂಕ್‌ನ ಪ್ರತಿನಿತ್ಯದ ವ್ಯವಹಾರದ ಲೆಕ್ಕ ಪತ್ರಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಎಲ್ಲವೂ ಕ್ರೆಡಿಟ್‌ಕಾರ್ಡ್ ಮತ್ತು ಕಂಪ್ಯೂಟರ್ ಮೂಲಕ ನಡೆಯುವುದರಿಂದ ಅಂದಂದಿನ ಲೆಕ್ಕಗಳನ್ನು ಬೆಂಗಳೂರಿನ ಬಿ.ಕಾಂ. ಮಾಡಿದ ತರುಣ/ತರುಣಿಯರು ಬೆಂಗಳೂರಿನಲ್ಲಿ ಕುಳಿತು ನಿರ್ವಹಿಸುತ್ತಾರೆ. ಏಕೆ? ಇಲ್ಲಿ ಅವರಿಗೆ ಸಂಬಳ ಕಡಿಮೆ ಕೊಡಬಹುದು, ಅಲ್ಲಾದರೆ, ಜಾಸ್ತಿ ಕೊಡಬೇಕಾಗುತ್ತದೆ! ಅಷ್ಟೇ! ಇದು ಬಂಡವಾಳಶಾಹಿಯ ಹೊಸ ಕಾರ್ಯನಿರ್ವಹಣೆ.
ಇದು ಆಧುನಿಕೋತ್ತರತೆ ಅಥವಾ ಆಧುನಿಕೋತ್ತರ ಸಂದರ್ಭ. ಈ ಸಂದರ್ಭದ ಹೊಸ ವಿಚಾರಗಳೇ ಆಧುನಿಕೋತ್ತರ ವಿಚಾರಧಾರೆ. ಇವುಗಳನ್ನು ಇಲ್ಲಿ ಸ್ಥೂಲವಾಗಿ ಗಮನಿಸಿ, ಅವುಗಳು ನಮ್ಮ ಸಮಕಾಲೀನ ಸಂದರ್ಭವನ್ನು ರೂಪಿಸುತ್ತಿರುವ ರೀತಿಯನ್ನು ಅರಿತರೆ, ನಮ್ಮ ತಲ್ಲಣಗಳ ಮೂಲವನ್ನು ಮತ್ತು ಸ್ವರೂಪವನ್ನು ಅರಿಯಲು ಸಾಧ್ಯವಾಗುತ್ತದೆ.
ಆಧುನಿಕೋತ್ತರ ಸಂದರ್ಭದ ಪ್ರಮುಖ ಪ್ರಕ್ರಿಯೆಯಾದ ಜಾಗತೀಕರಣವನ್ನು ಕುರಿತು ಸಾಮಾನ್ಯವಾಗಿ, ನಮ್ಮ ಸ್ಥಳೀಯ ಸಂಸ್ಕೃತಿ, ಗುರುತುಗಳನ್ನು ಅಳಿಸಿ ಹಾಕಿ ಎಲ್ಲವನ್ನೂ ಒಂದೇ ಮಾಡಿಬಿಡುತ್ತದೆ, ಎಲ್ಲವೂ ಅಮೆರಿಕನ್‌ಮಯವಾಗುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಎಲ್ಲರನ್ನೂ ಜಾಗತಿಕ ಮಾರುಕಟ್ಟೆಯೊಂದಿಗೆ ಜೋಡಿಸುವ, ಎಲ್ಲರನ್ನೂ ಬಹುರಾಷ್ಟ್ರೀಯ ಕಂಪನಿಗಳ ಗ್ರಾಹಕರನ್ನಾಗಿ ಮಾಡಿಬಿಡುವ ಭೂತ ಜಾಗತೀಕರಣ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ, ಇಂದು ಪ್ರಪಂಚದಾದ್ಯಂತ ಸಂಸ್ಕೃತಿ ಆಧಾರಿತ ಹೋರಾಟಗಳನ್ನು, ಬೃಹತ್ ಅದುದನ್ನು ಒಡೆದು, ಸಣ್ಣ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಿಕೊಳ್ಳುವ ಚಳುವಳಿಗಳನ್ನು ನಾವು ಗಮನಿಸಬಹುದು. ಇವುಗಳನ್ನು ಕೆಲವು ರಾಜಕೀಯಶಾಸ್ತ್ರಜ್ಞರು ಜಾಗತೀಕರಣಕ್ಕೆ ಪ್ರತಿಯಾಗಿ ಹುಟ್ಟುತ್ತಿರುವ ಚಳುವಳಿಗಳಾಗಿ ನೋಡುತ್ತಾರೆ. ಇವರ ಪ್ರಕಾರ ಈ ವಿಭಿನ್ನ ಚಳುವಳಿಗಳನ್ನು ಸಂಘಟಿಸಿ, ಜಾಗತೀಕರಣದ ವಿರುದ್ಧ ಹೋರಾಡಲು ಬಳಸಲು ಸಾಧ್ಯ. ಇದರ ಸಾಧ್ಯ ಅಸಾಧ್ಯತೆಗಳನ್ನು ಕುರಿತು ನಂತರ ಗಮನಿಸಬಹುದು. ಇಲ್ಲಿ ನಾನು ಜಾಗತೀಕರಣ ಮತ್ತು ಈ ವಿಭಿನ್ನ ಛಿದ್ರವಾದ ಸಂಸ್ಕೃತಿ ಆಧಾರಿತ ಚಳುವಳಿಗಳನ್ನು ಮತ್ತೊಂದು ರೀತಿಯಲ್ಲಿ ಪರಿಭಾವಿಸಿರುವ ರೀತಿಯನ್ನು ಪ್ರಸ್ತಾಪಿಸಲು ಬಳಸುತ್ತೇನೆ. ಜಾಗತೀಕರಣದ ಬಗ್ಗೆ ಕೆಲಸ ಮಾಡಿರುವ ಕೆಲವು ಅಧ್ಯಯನಕಾರರ ಪ್ರಕಾರ, ಈ ಸಂಸ್ಕೃತಿ ಆಧಾರಿತ ಚಳುವಳಿಗಳೂ ಕೂಡ ಜಾಗತೀಕರಣ ಪ್ರಕ್ರಿಯೆಯ ಭಾಗವೇ. ಅವರ ಅರ್ಥದಲ್ಲಿ ಜಾಗತೀಕರಣಕ್ಕೆ ಪ್ರತಿಯಾಗಿ ಬಂದ ಚಳುವಳಿಗಳೂ ಕೂಡ ಆ ಪ್ರಕ್ರಿಯೆಯ ಭಾಗವೇ ಆಗಿರುತ್ತದೆ. ಈ ಅರ್ಥದಲ್ಲಿ ಜಾಗತೀಕರಣವೆಂದರೆ, ಎಲ್ಲವನ್ನೂ ಬುಲ್‌ಡೋಜ್ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವುದೂ ಹೌದು, ಹಲವು ಸಂಸ್ಕೃತಿಗಳಿಗೆ ದಾರಿ ಮಾಡಿಕೊಡುವುದೂ ಹೌದು. ಇವು ಒಂದೇ ಪ್ರಕ್ರಿಯೆಯ ಭಾಗವೇ. ಅವರು ಇವುಗಳನ್ನು ಎರಡು ಬೇರೆ, ಬೇರೆಯಾದ ಪ್ರಕ್ರಿಯೆಗಳಾಗಿ ನೋಡುವುದಿಲ್ಲ, ಬದಲಿಗೆ ಈ ಸಂದರ್ಭದಲ್ಲಿ ಹೇಗೆ ಎರಡೂ ಒಂದರೊಳಗೊಂದು ಬೆರೆಯುತ್ತಿವೆ ಎಂದು ನೋಡುತ್ತಾರೆ. ಅವರ ಪ್ರಕಾರ ಇಂದು ಜಾಗತೀಕರಣ (globalization) ಮತ್ತು ಸ್ಥಳೀಕರಣ (localization) ಎರಡೂ ಒಂದರೊಳಗೊಂದು ಬೆರೆಯುತ್ತಿವೆ. ಇದನ್ನು ಗುರುತಿಸಲು ಅವರು ಮತ್ತೆರೆಡು ಪರಿಕಲ್ಪನೆಗಳನ್ನು ಬಳಸುತ್ತಾರೆ. ಅದು glocalization ಮತ್ತು lobalization. ಅಂದರೆ ಜಾಗತಿಕವಾದುದು, ಸ್ಥಳೀಯವಾದ ಮುಖ ಧರಿಸುತ್ತಿದೆ ಹಾಗೆಯೇ ಸ್ಥಳೀಯವಾದುದು ಜಾಗತಿಕವಾಗುತ್ತಿದೆ. ಇದನ್ನು ಒಂದು ಉದಾಹರಣೆ ನೀಡಿದರೆ ಸ್ಪಷ್ಟವಾಗಬಹುದು. ಕೋಕ್ ಕಂಪನಿಯ ಜಾಹೀರಾತುವಿನಲ್ಲಿ ಅಮೀರ್‌ಖಾನ್ ಹಿಮಾಲಯದ ತಪ್ಪಲಿನಲ್ಲಿ ಷೆರ್ಪಾ ಜನಾಂಗದವನಾಗಿ ಕೋಕ್ ಅನ್ನು ಪ್ರವಾಸಿಗರಿಂದ ಪಡೆದು ಕುಡಿದು ಕುಣಿಯುವ ದೃಶ್ಯ ಇಲ್ಲಿ ನೆನಪಿಸಿಕೊಳ್ಳಬಹುದು. ಸಣ್ಣ ಸಂಸ್ಕೃತಿಯ ಮುಖವಾಡದಲ್ಲೇ ಬಹುರಾಷ್ಟ್ರೀಯ ಕಂಪನಿಯ ವಸ್ತು ಮಾರಾಟವಾಗಲು ಹವಣಿಸುತ್ತಿರುವುದನ್ನು ಈ ಜಾಹೀರಾತು ಪ್ರತಿನಿಧಿಸುತ್ತದೆ. ಹಾಗೆಯೇ ನಮ್ಮ ಜಾನಪದ ಕಲಾತಂಡಗಳಿಗೆ ವಿಶ್ವಮಾರುಕಟ್ಟೆ ಇದೆ. ಆದರೆ ಅದರ ಲಾಭವನ್ನು ಮಧ್ಯವರ್ತಿಗಳು ಲಪಟಾಯಿಸುತ್ತಿದ್ದಾರೆ ಅಷ್ಟೇ.
ಈಗ ನಮ್ಮ ಸಮಕಾಲೀನ ಸಂದರ್ಭದ ಚಳುವಳಿಗಳನ್ನು ಗಮನಿಸಿದರೆ ಮೇಲಿನ ಕೆಲವು ವಿಷಯಗಳು ಸ್ಪಷ್ಟರೂಪ ಪಡೆಯಬಹುದು. ೭೦ ಮತ್ತು ೮೦ರ ದಶಕದಲ್ಲಿ ಕರ್ನಾಟಕದಲ್ಲಿ ನಾವು ಹಲವಾರು ಪ್ರಗತಿಪರ ಎನ್ನುವ ಚಳುವಳಿಗಳನ್ನು ಗಮನಿಸಬಹುದಾಗಿತ್ತು. ದಲಿತ ಚಳುವಳಿ, ರೈತ ಚಳುವಳಿ, ಹಿಂದುಳಿದ ವರ್ಗಗಳು, ಮಹಿಳಾವಾದಗಳು ಪ್ರಬಲಗೊಳ್ಳುತ್ತಿದ್ದ ಕಾಲ ಅದು. ಈ ಎಲ್ಲ ಚಳುವಳಿಗಳನ್ನು ಒಟ್ಟಾಗಿಸಿ ಒಂದು ಪ್ರಗತಿಪರವಾದ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸಬೇಕೆಂಬ ಹಂಬಲಕ್ಕೂ ಇದು ೮೦ರ ದಶಕದ ಮಧ್ಯಭಾಗದ ನಂತರ ದಾರಿಮಾಡಿಕೊಟ್ಟಿತ್ತು. ಆದರೆ ಆ ರೀತಿಯ ಪರ್ಯಾಯ ರೂಪುಗೊಳ್ಳಲೇ ಇಲ್ಲ. ಏಕೆ ಎನ್ನುವುದಕ್ಕೆ ಕಾರಣಗಳನ್ನು ವೈಯಕ್ತಿಕ ನೆಲೆಗಳಲ್ಲಿ, ವ್ಯಕ್ತಿಗತ ನೆಲೆಗಳಲ್ಲಿ ಹುಡುಕಲಾಗಿತ್ತು. ಈಗ ಸೈದ್ಧಾಂತಿಕವಾಗಿ ಅವುಗಳನ್ನು ಪರೀಕ್ಷಿಸಲು ಕಾಲ ಪಕ್ವವಾಗಿದೆ. ೮೦ರ ದಶಕದಲ್ಲಿ ಪ್ರಬಲವಾಗಿದ್ದ ಎಲ್ಲಾ ಚಳುವಳಿಗಳೂ ಇಂದು ಬಹುತೇಕ ಛಿದ್ರ ಮನೆಗಳಾಗಿವೆ.
ಉದಾಹರಣೆಗೆ ದಲಿತ ಚಳುವಳಿಯನ್ನು ಗಮನಿಸಿದರೆ, ಇಂದು ಅದರ ಮುಂದೆ ಇರುವ ಪ್ರಬಲ ಸವಾಲುಗಳಲ್ಲಿ ಮುಖ್ಯವಾದದ್ದು ಆಂತರಿಕ ವೈರುಧ್ಯ. ದಲಿತ ಚಳುವಳಿಯನ್ನು ಬಹುತೇಕ ಮಂದಿ ಜಾತಿ ಆಧಾರಿತ ಚಳುವಳಿಯಾಗಿ ನೋಡುತ್ತಾರೆ. ಇದು ಸರಿಯಲ್ಲ. ಒಂದೇ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಜಾತಿಗಳು ಒಟ್ಟಾಗಿ ರೂಪಿಸಿದ ಚಳುವಳಿ ದಲಿತ ಚಳುವಳಿ. ದಲಿತ ಎನ್ನುವ ಪರಿಕಲ್ಪನೆ, ಮೂಲತ: ಒಂದು ರಾಜಕೀಯ ಪರಿಕಲ್ಪನೆ ಮತ್ತು ಆಧುನಿಕವಾದ ಪರಿಕಲ್ಪನೆ. ದಲಿತ ಎನ್ನುವ ಪರಿಕಲ್ಪನೆ, ಹಲವಾರು ಜಾತಿ/ಸಮುದಾಯಗಳನ್ನು ಸಮಾನ ರಾಜಕೀಯ ಉದ್ದೇಶಕ್ಕಾಗಿ ಒಂದಾಗಿ ಬೆಸೆಯುತ್ತದೆ. ಹೀಗಾಗಿ ಇದು ಜಾತಿಯನ್ನು ಮೀರಿದ ಪರಿಕಲ್ಪನೆ ಮತ್ತು ಜಾತಿಯ ದೌರ್ಜನ್ಯವನ್ನು ವಿರೋಧಿಸಿ ಹುಟ್ಟಿದ ಪರಿಕಲ್ಪನೆ. ಆದರೆ ಇಂಥ ಚಳುವಳಿಯ ಮುಂದೆ ಇರುವ ಬಹುದೊಡ್ಡ ಸವಾಲು ಈ ಪರಿಕಲ್ಪನೆಯನ್ನೇ ಅಡ್ಡಡ್ಡ ಸೀಳುವಷ್ಟು ಸಮರ್ಥವಾದದ್ದು. ನಾನಿಲ್ಲಿ ಎಸ್.ಸಿ./ಎಸ್.ಟಿಯಲ್ಲಿ ಒಳ ಮೀಸಲಾಗಿ ಕೋರುತ್ತಿರುವ ಚಳುವಳಿಗಳ ಹಿನ್ನಲೆಯಲ್ಲಿ ಮಾತನಾಡುತ್ತಿದ್ದೇನೆ. ದಲಿತ ಚಳುವಳಿ ತಾನು ವಿರೋಧಿಸುತ್ತಿರುವ ಯಾಜಮಾನ್ಯದ ವಿರುದ್ಧ ಹಲವಾರು ಶೋಷಿತ ಎನ್ನುವ ಜಾತಿಗಳನ್ನು ಒಟ್ಟಾಗಿಸುತ್ತಿದ್ದರೆ, ಅದರಲ್ಲೇ ಮತ್ತೊಂದು ರೀತಿಯ ಜಾತಿ ಧೃವೀಕರಣ ಆರಂಭವಾಗಿದೆ. ನಾನಿಲ್ಲಿ ಈ ಬೆಳವಣಿಗೆ ಸರಿ ಎಂದಾಗಲಿ ತಪ್ಪು ಎಂದಾಗಲಿ ಹೇಳುತ್ತಿಲ್ಲ. ಸಣ್ಣ, ಸಣ್ಣ ಸಾಂಸ್ಕೃತಿಕ ಎಂದು ಕರೆಯಲಾಗುವ ಗುರುತುಗಳು ಹೇಗೆ ಪ್ರಬಲವಾಗುತ್ತಿವೆ ಇಂದಿನ ಸಂದರ್ಭದಲ್ಲಿ ಎಂದಷ್ಟೇ ವಿವರಿಸುತ್ತಿದ್ದೇನೆ. ಏಕೆಂದರೆ ಈ ರೀತಿಯ ಸಣ್ಣ ಗುರುತುಗಳ ಪ್ರವರ್ಧಮಾನವನ್ನು ಎರಡೂ ನೆಲೆಯಲ್ಲಿ ನೋಡಲಾಗುತ್ತಿದೆ. ದಲಿತ ಪರಿಕಲ್ಪನೆಯಡಿ ಬರುವ ವಿವಿಧ ಜಾತಿಗಳಲ್ಲೇ ಅಸಮಾನತೆ ಇದೆ, ಅದನ್ನು ಹೋಗಲಾಡಿಸದೆ ಮುಂದೆ ಹೆಜ್ಜೆ ಇಡುವುದು ಒಳಗಿನ ಪ್ರಬಲ ಜಾತಿಗೆ ಅನುಕೂಲಕರವಾಗಿ ಒಳಗಿನ ಅಸಮಾನತೆಯನ್ನು ಹೆಚ್ಚು ಮಾಡುತ್ತದೆ ಎನ್ನುವ ವಾದ ಒಂದಾದರೆ, ಮತ್ತೊಂದು ಇದು ದಲಿತ ಚಳುವಳಿಯನ್ನು ಒಡೆಯಲು ಮೇಲ್ಜಾತಿಗಳು ನಡೆಸಿರುವ ಹುನ್ನಾರ ಎಂದು ವಾದಿಸುತ್ತದೆ ಹಾಗು ಇದರಿಂದ ಅಂತಿಮವಾಗಿ ಯಾವುದೇ ರೀತಿಯ ಲಾಭ ದಲಿತರಿಗೆ ದಕ್ಕುವುದಿಲ್ಲ ಎನ್ನುತ್ತದೆ. ಈ ಎರಡೂ ವಾದಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಥವಾ ಅವುಗಳ ನಡುವೆ ಪಂಚಾಯಿತಿ ಮಾಡುವುದು ಈ ಲೇಖನದ ಉದ್ಧೇಶವಲ್ಲ. ನಮಗಿಲ್ಲಿ ಮುಖ್ಯವಾಗಬೇಕಾದದ್ದು ಈ ರೀತಿಯ ಸಾಂಸ್ಕೃತಿಕ ಎನ್ನುವ ಗುರುತುಗಳ ಹೆಚ್ಚಳದ ಪ್ರಕ್ರಿಯೆಯ ಪರಿಣಾಮ ಏನು ಎನ್ನುವುದು ಹಾಗು ಎಷ್ಟರ ಮಟ್ಟಿಗೆ ಇದು ಸಮಕಾಲೀನ ಸಂದರ್ಭದ ಸವಾಲುಗಳನ್ನು ಎದುರಿಸುತ್ತಿವೆ ಎನ್ನುವುದು.
ಒಳಮೀಸಲಾತಿಯ ಅಗತ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಿರುವವರು ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಗಮನದಲ್ಲಿ ಇಟ್ಟು ಮಾತನಾಡುತ್ತಿದ್ದಾರೆ. ಆದರೆ ಇಂದಿನ ಸಂದರ್ಭದಲ್ಲಿ, ರಾಷ್ಟ್ರಪ್ರಭುತ್ವ ಸರಕಾರಿ ಉದ್ಯೋಗಗಳನ್ನೇ ಮಾಯವಾಗಿಸುತ್ತಿದೆ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಯವರ ಕೈಯಲ್ಲಿಡುವ ಮಾತನಾಡುತ್ತಿದೆ. ಹಾಗಾದರೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ಒಳಮೀಸಲಾತಿ ಕೇಳುವ ಉದ್ದೇಶ ಎಷ್ಟರ ಮಟ್ಟಿಗೆ ಸರಿ? ಉದ್ಯೋಗಗಳು ಖಾಸಗಿ ರಂಗದಲ್ಲಿ ಸೃಷ್ಟಿಯಾಗುತ್ತಿದ್ದರೆ ಅವುಗಳನ್ನು ಪಡೆಯುವುದು ಹೇಗೆ ಎನ್ನುವ ಪ್ರಶ್ನೆಯನ್ನೇ ಈಗಿನ ಪರಿಸ್ಥಿತಿ ನಗಣ್ಯವಾಗಿಸುತ್ತದೆ. ದಲಿತರು ಕಮ್ಮಿ ಪ್ರಮಾಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಕೆಲಸದ ಸಮಸ್ಯೆ ಇರಲಿಲ್ಲ. ದಲಿತರು ಹೆಚ್ಚೆಚ್ಚು ಪ್ರಮಾಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಸರಕಾರಿ ಉದ್ಯೋಗಗಳಿಗೆ ಆಶಿಸುತ್ತಿದ್ದಾರೆ. ಆದರೆ ನೌಕರಿಯೇ ಇಲ್ಲ. ಉದ್ಯೋಗವಕಾಶಗಳು ಕಮ್ಮಿಯಾಗಿವೆ. ರಾಷ್ಟ್ರಪ್ರಭುತ್ವ ತನ್ನ ಹೊಣೆಗಾರಿಕೆಯಾದ ಆಡಳಿತ ಮತ್ತು ಸಮಾಜಕಲ್ಯಾಣ ತತ್ವಗಳಿಗೆ ಜಾಗತೀಕರಣದ ಸಂದರ್ಭದಲ್ಲಿ ತಿಲಾಂಜಲಿ ಇತ್ತಿರುವುದರಿಂದ ಈ ಸಮಸ್ಯ ಉಂಟಾಗಿದೆ ಎಂದು ನೋಡದೆ, ತಮ್ಮ ತಮ್ಮಲ್ಲೇ ಕಿತ್ತಾಡಲಿಕ್ಕೆ ಈ ಸಾಂಸ್ಕೃತಿಕ ಗುರುತುಗಳು ಕಾರಣವಾಗುತ್ತಿವೆ. ೪ ಉದ್ಯೋಗಗಳು ಇದ್ದು ೩ಜನ ವಿದ್ಯಾವಂತರು ಇದ್ದಾಗ ೩ ಜನ ಯಾವ ದಲಿತ ಜಾತಿಗೆ ಸೇರಿದವರು ಎಂಬ ಪ್ರಶ್ನೆ ಆರಂಭವಾಗಲಿಲ್ಲ. ಈ ಸಮಸ್ಯೆ ಆರಂಭವಾದದ್ದು ೪ ಉದ್ಯೋಗಗಳು ೩ ಆದಾಗ ಮತ್ತು ವಿದ್ಯಾವಂತ ದಲಿತರ ಸಂಖ್ಯೆ ೪ ರಿಂದ ೬ ಆದಾಗ ಎಂಬುದು ಮುಖ್ಯ. ನಾನಿಲ್ಲಿ ತಾತ್ವಿಕವಾಗಿ ಒಳಮೀಸಲಾತಿಯನ್ನು ವಿರೋಧಿಸುತ್ತಿಲ್ಲ ಅಥವಾ ಅದು ಮುಖ್ಯ ಸಮಸ್ಯೆ ಎಂದೂ ಹೇಳುತ್ತಿಲ್ಲ. ಅದಕ್ಕಿಂತ ಜರೂರಾದದ್ದು ಬೇರೆ ಇz. ಆದರೆ ರಾಜಕೀಯ ಪರಿಕಲ್ಪನೆಯ ಬದಲು, ಸಾಂಸ್ಕೃತಿಕ ಗುರುತು ಎನ್ನುವ ಹೆಸರಲ್ಲಿ ಜನರನ್ನು ಸಂಘಟಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೇನೆ.
ಇನ್ನಷ್ಟು ಉದಾಹರಣೆಗಳು ನೀಡಿದರೆ ಇದು ಸ್ಪಷ್ಟಗೊಳ್ಳಬಹುದು. ಹಿಂದೆ ಸಾರ್ವಜನಿಕ ಉದ್ದಿಮೆಗಳಲ್ಲಿ ವರ್ಗಆಧಾರಿತ ಸಂಘಟನೆಗಳಷ್ಟೇ ಇದ್ದವು. ನಂತರ ಹಲವಾರು ಜಾತಿಗಳು ಸೇರಿದ ದಲಿತ ಸಂಘಟನೆಗಳು ಅಂಬೇಡ್ಕರ್ ಹೆಸರಲ್ಲೋ, ಎಸ್.ಸಿ. ಎಸ್.ಟಿ ಹೆಸರಲ್ಲೋ ಆರಂಭವಾದವು ಅವೆರಡು ಕೂಡ ನಾವು ಪ್ರಗತಿಪರ ಎಂದು ಗುರುತಿಸುವ ಪರಿಧಿಯಲ್ಲೇ ಇದ್ದವು. ಆದರೆ ಈಗ ಕನಕ ಸಂಘ, ಬಸವೇಶ್ವರ ಸಂಘ, ವಾಲ್ಮೀಕಿ ಸಂಘ, ಕನ್ನಡ ಸಂಘ, ತಮಿಳು ಸಂಘ ಇತ್ಯಾದಿ ಸಾಂಸ್ಕೃತಿಕ ಗುರುತುಗಳನ್ನು ಆಧರಿಸಿದ ಸಂಘಟನೆಗಳು ಆರಂಭವಾಗಿ ಸಾರ್ವಜನಿಕ ಉದ್ದಿಮೆಗಳು ನೌಕರರನ್ನು ಸಂಘಟಿಸುತ್ತಿವೆ. ಇದು ಅಂತಿಮವಾಗಿ ಯಾರಿಗೆ ಲಾಭ? ಯೋಚಿಸಬೇಕಾಗಿದೆ.
ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸಲು ಕೆಲವರು ಸಾಂಸ್ಕೃತಿಕ ಎಂದು ಗುರುತಿಸಲಾಗುವ ಗುರುತುಗಳನ್ನು ಆಧರಿಸಿ ಪ್ರತಿರೋಧ ರೂಪಿಸಬೇಕು ಎಂದು ವಾದಿಸುತ್ತಾರೆ. ಇವರ ಅರ್ಥದಲ್ಲಿ ‘ಸಾಂಸ್ಕೃತಿಕ ಎನ್ನುವುದ ಧರ್ಮ, ಜಾತಿ, ಪಂಗಡಳಿಗೆ ಸಂಬಂಧಿಸಿದ್ದು. ಇವರ ಕಾರ್ಯವೈಖರಿ ಹೇಗಿದೆ ಎಂದರೆ, ಒಂದು ಬಹುರಾಷ್ಟ್ರೀಯ ಕಂಪನಿ ಗಣಿಗಾರಿಕೆಯನ್ನು ಆರಂಭಿಸುತ್ತಿದೆ ಎಂದರೆ, ಇವರು ಅದಕ್ಕೆ ವಿರುದ್ಧವಾಗಿ ಅದು ಅಲ್ಲಿರುವ ಒಂದು ಪುರಾತನ ದೇವಸ್ಥಾನವನ್ನು ಹೇಗೆ ನಾಶ ಮಾಡುತ್ತದೆ ಎಂದು ವಿರೋಧಿಸುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಪ್ರತಿರೋಧವನ್ನು ರೂಪಿಸಬಹುದು? ಆ ಕಂಪನಿ ದೇವಸ್ಥಾನದ ಪುನರುದ್ಧಾರಕ್ಕೆ, ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲಿದರೆ ಅದನ್ನು ಆಧರಿಸಿದ ಪ್ರತಿರೋಧದ ಕಥೆ ಏನು? ಹಾಗೆಯೇ ಕನ್ನಡ ಭಾಷೆ ನಾಶವಾಗುತ್ತದೆ ಎಂದು ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳನ್ನು ವಿರೋಧಿಸಿದರೆ, ಅವರು ಕನ್ನಡ ಭಾಷೆಯಲ್ಲೂ ಕೆಲವು ಸಾಫ್ಟ್‌ವೇರ್‌ಗಳನ್ನು ರೂಪಿಸಬಹುದು ಮತ್ತು ಪ್ರತಿ ವರ್ಷ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕೆಲವನ್ನು ಗುರುತಿಸಿ ಕೆಲವು ಲಕ್ಷಗಳ ಪ್ರಶಸ್ತಿಗಳನ್ನು ನೀಡಲು ಆರಂಬಿಸಿದರೆ ಆಗ ಕನ್ನಡವನ್ನು ಆಧರಿಸಿದ ಪ್ರತಿರೋಧದ ಕಥೆ ಏನು? ನಾನಿಲ್ಲಿ ಕೆಲವು ಊಹಾತ್ಮಕ ಉದಾಹರಣೆಗಳನ್ನು ನೀಡುತ್ತಿದ್ದೇನೆ ಅಷ್ಟೇ. ’ಸಾಂಸ್ಕೃತಿಕ’ಎನ್ನುವ ಗುರುತುಗಳನ್ನು ಆಧರಿಸಿದ ಪ್ರತಿರೋಧಗಳು ಜಾಗತೀಕರಣದ ಭಾಗವೇ ಮತ್ತು ಪೂರಕವಾದದ್ದೇ ಎಂಬ ಗುಮಾನಿಯನ್ನು ಮೂಡಿಸುವುದು ನನ್ನ ಉದ್ದೇಶ. ಏಕೆ ಸ್ಥಳೀಕರಣ ಕೂಡ ಜಾಗತೀಕರಣದ ಭಾಗವೇ ಎಂದರೆ, ಸ್ಥಳೀಯವಾದದ್ದನ್ನು ಸುಲಭವಾಗಿ ಜಾಗತಿಕವು ತನ್ನದಾಗಿಸಿಕೊಳ್ಳಬಹುದು, ಪ್ರಬಲವಾದ ಜಾಗತಿಕ ಪ್ರತಿರೋಧವಿದ್ದರೆ ಅದನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಲು ಜಾಗತೀಕರಣಕ್ಕೆ ಸಾಧ್ಯವಾಗುವುದಿಲ್ಲ.
ಈ ಸ್ಥಳೀಕರಣ, ಸಾಂಸ್ಕೃತಿಕ ಗುರುತುಗಳ ಹೆಚ್ಚಳ ಇವುಗಳೆಲ್ಲವೂ ಆಧುನಿಕೋತ್ತರ ವಿಚಾರಧಾರೆಯ ಭಾಗವಾದ ಛಿದ್ರೀಕರಣ, ಮೆಟಾನೆರೇಟಿವ್‌ಗಳ (meta-narrative, ವಿರಾಟ್‌ಕಥಾನಕಗಳು, ಉದಾ: ಮಾರ್ಕ್ಸ್‌ವಾದ) ಬಗೆಗಿನ ಸಂದೇಹ ಇವುಗಳ ಭಾಗವಾಗೇ ಮೂಡುತ್ತಿರುವವು ಎಂಬುದು ನನ್ನ ವಾದ. ಇಂದು ನಮ್ಮ ಅನೇಕ ತಲ್ಲಣಗಳಿಗೆ ಕಾರಣವಾಗಿರುವುದು ಈ ಆಧುನಿಕೋತ್ತರ ವಿಚಾರಧಾರೆಯೇ. ಪ್ರಬಲ ಯಾಜಮಾನ್ಯಗಳಿಗೆ ಪ್ರಬಲ ಪ್ರತಿರೋಧ ನೀಡಲು ವಿರಾಟ್ ಕಥನಗಳಿಗೆ ಮಾತ್ರ ಸಾಧ್ಯ. ಸ್ಥಳೀಕೃತ ಪ್ರತಿರೋಧಗಳನ್ನು ಸುಲಭವಾಗಿ ಪ್ರಬಲ ಯಾಜಮಾನ್ಯಗಳು ತಣಿಸಿಬಿಡುತ್ತವೆ, ತುಳಿಯುವುದರ ಮೂಲಕ ಅಥವಾ ಅದನ್ನು ತೃಪ್ತಿಗೊಳಿಸಿ, ಶಮನಗೊಳಿಸುವ ಮೂಲಕ. ನಾನಿಲ್ಲಿ ವಿರಾಟ್ ಕಥಾನಕಗಳನ್ನು (ಅಂದರೆ ಮಾರ್ಕ್ಸ್‌ವಾದವನ್ನು ಅಥವಾ ಅದೇ ಮಾದರಿಯ ಇಡೀ ವಿಶ್ವವನ್ನು ವೈಚಾರಿಕತೆಯ ಮೂಲಕ ಅರಿಯಲು ಸಾಧ್ಯ) ಸಮರ್ಥಿಸುತ್ತಿದ್ದೇನೆ ಎಂದಲ್ಲ. ಅಥವಾ ಸ್ಥಳೀಯತೆಯನ್ನು ಆಧರಿಸಿದ ಗುರುತುಗಳು ಎತ್ತುತ್ತಿರುವ ರಾಜಕೀಯ ಪ್ರಶ್ನೆಯನ್ನಾಗಲಿ ಅಥವಾ ಶೋಷಣೆಯ ಪ್ರಶ್ನೆಯನ್ನಾಗಲಿ ಗೌಣವಾಗಿಸುತ್ತಿದ್ದೇನೆ ಎಂದೂ ಅಲ್ಲ. ಈ ಸ್ಥಳೀಯತೆಯನ್ನು ಆಧರಿಸಿದ ಗುರುತು ರಾಜಕಾರಣ ಮುಂದುಮಾಡುವ ಪ್ರಶ್ನೆಗಳನ್ನು ಮತ್ತು ಪ್ರಬಲ ಯಾಜಮಾನ್ಯವನ್ನು ವಿರೋಧಿಸಬಹುದಾದ ವಾದಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುತ್ತಿರುವೆ. ಅವೆರಡನ್ನು ಬೇರೆ ಬೇರೆಯಾಗಿ ನೋಡದೆ ವಿರುದ್ಧವಾದದ್ದಾಗಿ ನೋಡದೆ ಇರಲು ಸಾಧ್ಯವೇ? ಮಾರ್ಕ್ಸ್‌ವಾದ ಬಂಡವಾಳದ ಜೊತೆಗೆ ಸ್ಥಳೀಯ ಮತ್ತು ಸಾಂಸ್ಕೃತಿಕ ಎನ್ನುವ ಪ್ರಶ್ನೆಗಳನ್ನು ಜೊತೆಯಾಗಿ ನೋಡುವಂತೆ ಮಾಡಲಾಗದೆ? ಹಾಗೆಯೇ ಸ್ಥಳೀಯ ಚಳುವಳಿಗಳು ಎಂದು ಕರೆದುಕೊಳ್ಳುವ ಚಳುವಳಿಗಳು ಗುರುತು ಪ್ರಶ್ನೆಯನ್ನು ಮಾತ್ರ ಮುಂದು ಮಾಡದೆ, ಅದರೊಂದಿಗೆ ಇತರ ಶೋಷಿತರ ಪ್ರಶ್ನೆಗಳನ್ನು ತಮ್ಮ ಚಳುವಳಿಯ ಭಾಗವಾಗಿ ಇಂಟಿಗ್ರೇಟ್ ಮಾಡಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗಳಿವು.
ಇವುಗಳಿಗೆ ಉತ್ತರ ಸದ್ಯದ ಸಿದ್ಧಾಂತಗಳಲ್ಲಿ ಇಲ್ಲ. ಹಿಂದೆ ತಿಳಿಸಿದಂತೆ ಫೂಕೋನ ವಿಚಾರಗಳಾಗಲಿ ಅಥವಾ ಡೆರಿಡಾನ ವಿಚಾರಗಳಾಗಲಿ ಶೋಷಣೆಯ ವ್ಯವಸ್ಥೆಯನ್ನು ವಿಶ್ಲೇಷಿಸಲು ಬಳಸಬಹುದೇ ಹೊರತು ಅದಕ್ಕೆ ಪರ್ಯಾಯವಾಗಿ ಅವುಗಳು ಏನನ್ನೂ ಮುಂದಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿಲ್ಲ ಎಂದೇನಲ್ಲ. ಮಾರ್ಕ್ಸ್‌ವಾದವು ತನ್ನ ಹಿಂದಿನ ನಿಲುವುಗಳನ್ನು ಮರುಪರಿಶೀಲನೆಗೆ ಒಳಪಡಿಸುತ್ತಿದೆ. ಇದರಿಂದಾಗಿಯೇ ಮಾರ್ಕ್ಸ್‌ವಾದದಲ್ಲೇ ಮಾರ್ಕ್ಸಿಸ್ಟ್ ಫೆಮಿನಿಸ್ಟ್, ಸಂರಚನೋತ್ತರವಾದಿ ಮಾರ್ಕ್ಸ್‌ವಾದ, ವಸಾಹತೋತ್ತರವಾದಿ ಮಾರ್ಕ್ಸ್‌ವಾದ ಎಂಬ ಹೊಸ ವಾದಗಳು ಉಗಮವಾಗಿರುವವು. ಎಲ್ಲ ಛಿದ್ರ ಸ್ಥಳೀಯಗುರುತುಗಳನ್ನು ಆಧರಿಸಿದ ಚಳುವಳಿಗಳನ್ನು ಒಂದು ವಿಶಾಲವಾದ ಪರಿಕಲ್ಪನೆಯಡಿ ತರುವ ಪ್ರಯತ್ನಗಳೂ ನಡೆಯುತ್ತಿವೆ. ದಲಿತರು, ಮಹಿಳೆಯರು ಮತ್ತು ಇತರ ಶೋಷಿತರು ಒಂದಾಗಬೇಕು ಎಂಬ ಘೋಷಣೆಗಳೇನೂ ಹೊಸದಲ್ಲ. ಆದರೆ ಅದಕ್ಕಿರುವ ಅಡ್ಡಿ ಆತಂಕಗಳನ್ನು ಕುರಿತು ಸೈದ್ಧಾಂತಿಕವಾಗಿಯಾಗಲಿ (theoretically) ಅಥವಾ ತಾತ್ವಿಕವಾಗಿಯಾಗಲಿ (ideologically) ನಾವು ಚರ್ಚೆಯನ್ನು ಮಾಡಿಲ್ಲ. ಮಾಡುವ ಮೊದಲೆ ದಲಿತ ಅಥವಾ ಮಹಿಳೆ ಎನ್ನುವ ಪರಿಕಲ್ಪನೆಗಳೇ ಛಿದ್ರೀಕರಣಕ್ಕೆ ಒಳಗಾಗುತ್ತಿವೆ. ದಲಿತರಲ್ಲಿನ ಆಂತರಿಕ ವೈರುಧ್ಯ ಅಥವಾ ಮಹಿಳೆಯರಲ್ಲಿನ ಆಂತರಿಕ ವ್ಶೆರುಧ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಂತರ ದಲಿತರು ಮತ್ತು ಮಹಿಳೆಯರ ನಡುವಿನ ವ್ಶೆರುಧ್ಯಗಳೇನು, ಅವುಗಳನ್ನು ಬಗೆಹರಿಸುವುದು ಹೇಗೆ, ಅವುಗಳನ್ನು ಬಗೆಹರಿಸಿ ಅಥವಾ ಬಗೆಹರಿಸುವುದರೊಂದಿಗೆ ಸಮಾನ ಶತೃಗಳ ಜೊತೆ ಹೋರಾಡಲು ಪರಸ್ಪರ ಕೈಜೋಡಿಸುವುದು ಹೇಗೆ ಎಂಬ ಪ್ರಶ್ನೆಗಳನ್ನು ನಾವು ಇಂದು ಎದುರಿಸಬೇಕಾಗಿದೆ. ಎದುರಿಸಿದಾಗ ಸಿದ್ಧಾಂತಗಳು ತಲ್ಲಣಗಳನ್ನು ಉಂಟುಮಾಡುವುದಿಲ್ಲ, ಬದಲಿಗೆ ದಾರಿದೀಪಗಳಾಗಬಹುದು.

Saturday, March 14, 2009

ಸಂಶೋಧನೆಗೆ ಮತ್ತೆ ಮಹತ್ವ ಬಂದಿದೆ, ಜೊತೆಗೆ ಸಂಶೋಧನೆ ಎಂದರೇನೆಂದು ಕೇಳಿಕೊಳ್ಳುವ ಕಾಲವೂ ಬಂದಿದೆ

ಸಂಶೋಧನೆ ಎಂದರೇನು ಎಂದು ಕೇಳಿಕೊಳ್ಳುವ ದಿನ ಇವತ್ತು ಬಂದಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಡಾಕ್ಟೊರೇಟ್ ಪದವಿ ಪಡೆದವರನ್ನು ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ನಾವು ಕಾಣಬಹುದು. ಇವರನ್ನು ನಿಮಗೆ ಏಕೆ ಡಾಕ್ಟೊರೇಟ್ ನೀಡಿದ್ದಾರೆ? ಅದರ ಪ್ರಯೋಜನ ಏನು? ಏಕೆ ಡಾಕ್ಟೊರೇಟ್ ಆಫ್ ಫಿಲಾಸಫಿ ಎನ್ನುತ್ತಾರೆ? ಎಂದೆಲ್ಲಾ ಕೇಳಿದರೆ ಬಹಳ ಜನಕ್ಕೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಅಬ್ಬಬ್ಬ ಎಂದರೆ ಅವರ ಉತ್ತರ ಈ ರೀತಿ ಇರುತ್ತದೆ: ಶಿಸತ್ಯವನ್ನು ಹುಡುಕುವುದುಷಿ, ಶಿಹೊಸದನ್ನು ಕಂಡುಹಿಡಿಯುವುದುಷಿ, ಶಿಒಂದು ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿರುವುದರಿಂದ, ಡಾಕ್ಟರ್ ಎನ್ನುತ್ತಾರೆಷಿ, ಇತ್ಯಾದಿ. ಈ ಸಮಸ್ಯೆಯ ಮೂಲವು ಸಂಶೋಧನೆ, ತತ್ವಶಾಸ್ತ್ತ್ರ, ವಿಶ್ವವಿದ್ಯಾಲಯದ ಚರಿತ್ರೆ, ಅಧ್ಯಯನ ಶಿಸ್ತುಗಳ ಹುಟ್ಟು ಬೆಳವಣಿಗೆಗಳ ಚಾರಿತ್ರಾತ್ಮಕ ಪರಿಚಯದ ಕೊರತೆಯಲ್ಲಿದೆ.

ತತ್ವಶಾಸ್ತ್ತ್ರ
ಮನುಷ್ಯಪ್ರಾಣಿಯು ನಾನು ಯಾರು? ನಾನು ಏಕೆ ಇಲ್ಲಿದ್ದೇನೆ? ಹೇಗೆ ಬಂದೆ? ನನ್ನ ಸುತ್ತಲೂ ಏನಿದೆ? ನನಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನೆಗಳನ್ನು ಕೇಳುವುದರಿಂದ ತತ್ವಶಾಸ್ತ್ತ್ರ ಆರಂಭವಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲಿಗೆ ಥಿಯಾಲಜಿಯಲ್ಲಿ (ಧಾರ್ಮಿಕ ಆವರಣ) ಕಂಡುಕೊಳ್ಳಲಾಗಿತ್ತು. ಈಗಲೂ ಈ ಪ್ರಶ್ನೆಗಳಿಗೆ ಧರ್ಮಗಳು, ಪಂಥಗಳು ತಮ್ಮ ಅನುಯಾಯಿಗಳಿಗೆ ಉತ್ತರವನ್ನು ಒದಗಿಸುತ್ತವೆ. ಆದರೆ ಈ ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿದ್ದಂತೆ ತತ್ವಶಾಸ್ತ್ತ್ರದಲ್ಲಿಯೇ ಇತರೆ ಅಧ್ಯಯನ ಶಾಖೆಗಳು ಆರಂಭಗೊಂಡವು. ಮನುಷ್ಯನ ದೇಹವನ್ನು, ಅದರ ಸುತ್ತಮುತ್ತಲಿನ ವಸ್ತುಗಳನ್ನು ಅಧ್ಯಯನ ಮಾಡುವುದು ಒಂದು ಶಾಖೆ, ಆ ವಸ್ತುಗಳನ್ನು ಭೌತಿಕವಾಗಿ ಅಧ್ಯಯನ ಮಾಡುವುದು ಬೇರೆ, ರಾಸಾಯನಿಕವಾಗಿ ಅಧ್ಯಯನ ಮಾಡುವುದು ಬೇರೆ, ಸಾಮಾಜಿಕವಾಗಿ ಅಧ್ಯಯನ ಮಾಡುವುದು ಬೇರೆ, ಮನಸ್ಸನ್ನು ಅಧ್ಯಯನ ಮಾಡುವುದು ಬೇರೆ, ರಾಜಕೀಯವಾಗಿ ಅಧ್ಯಯನ ಮಾಡುವುದು ಬೇರೆ ಇತ್ಯಾದಿ, ಇತ್ಯಾದಿ. ಅಂದರೆ ನಾವು ಅಧ್ಯಯನ ಮಾಡುತ್ತಿರುವ ವಸ್ತುಗಳು ಒಂದೇ ಆದರೂ ಅವುಗಳ ಯಾವ ಅಂಶವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂಬುದರ ಮೇಲೆ ನಾವು ಯಾವ ಅಧ್ಯಯನ ಶಿಸ್ತಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇವೆ ಎಂಬುದು ನಿರ್ಧಾರವಾಗುತ್ತದೆ. ಉದಾಹರಣೆಗೆ ಒಂದು ಮರವನ್ನು ಅದರ ಭೌತಿಕ ಗುಣಗಳಿಗಾಗಿ ಅಧ್ಯಯನ ಮಾಡುವುದು ಭೌತಶಾಸ್ತ್ತ್ರದ ಭಾಗವಾದರೆ, ಅದರ ರಾಸಾಯನಿಕ ಗುಣಗಳಿಗಾಗಿ (ರಸಾಯನ ಶಾಸ್ತ್ತ್ರ), ಅದರ ಜೈವಿಕ ಗುಣಗಳಿಗಾಗಿ (ಜೀವಶಾಸ್ತ್ತ್ರ :/ ಸಸ್ಯಶಾಸ್ತ್ತ್ರ), ಒಂದು ಸಮಾಜದಲ್ಲಿ ಅದು ಪಡೆದಿರುವ ಮೌಲ್ಯಾತ್ಮಕ ಗುಣಗಳಿಗಾಗಿ (ಮಾನವಶಾಸ್ತ್ತ್ರ/ಜಾನಪದ/ಸಂಸ್ಕ್ಕತಿ ಅಧ್ಯಯನ) ಅಧ್ಯಯನ ಮಾಡುವುದು ಬೇರೆ ಬೇರೆ ಅಧ್ಯಯನ ಶಿಸ್ತುಗಳ ಭಾಗವಾಗುತ್ತದೆ. ಆದರೆ ಈ ಎಲ್ಲಾ ಅಧ್ಯಯನಗಳೂ ಮೂಲಭೂತ ಪ್ರಶ್ನೆಗಳಾದ ನಾನು ಯಾರು? ನನ್ನ ಸುತ್ತಮುತ್ತಲೂ ಏನಿದೆ? ಅದಕ್ಕೂ ನನಗೂ ಏನು ಸಂಬಂಧ? ಇವುಗಳಿಗೆ ಉತ್ತರ ಹುಡುಕುವ ಪ್ರಯತ್ನಗಳೇ ಆಗಿವೆ. ಆದ್ದರಿಂದ ನಾವು ಯಾವುದೇ ಅಧ್ಯಯನ ಶಿಸ್ತಿನ ಒಳಗೆ ಅಧ್ಯಯನ ಮಾಡಿದರೂ ಅದು ತತ್ವಶಾಸ್ತ್ತ್ರದ ಭಾಗವೇ ಆಗುತ್ತದೆ. ಡಾಕ್ಟ್ತ್ರಿನ್ (ಸಿದ್ದಾಂತ) ರೂಪಿಸುವವರು ಡಾಕ್ಟರ್ಗಳಾಗುತ್ತಾರೆ.

ವಿಶ್ವವಿದ್ಯಾಲಯಗಳು-ಧರ್ಮ(ರಿಲಿಜನ್)
ತತ್ವಶಾಸ್ತ್ತ್ರವು ಮೊದಲಿಗೆ ಧರ್ಮದೊಂದಿಗೆ ತಳುಕುಹಾಕಿಕೊಂಡಿದ್ದನ್ನು ನಾನು ಮೇಲೆ ಹೇಳಿದೆ. ಪ್ರಪಂಚದಲ್ಲಿ ಇಂದು ವಿಶ್ವವಿದ್ಯಾಲಯಗಳೆಂದು ಗುರುತಿಸುವ ವಿದ್ಯೆಯನ್ನು ರೂಪಿಸುವ ಮತ್ತು ಪ್ರಸರಿಸುವ ಪ್ರಯತ್ನಗಳೂ ಧರ್ಮದ ಭಾಗವಾಗಿಯೇ ಆರಂಭಗೊಂಡವು. ರಾಜಪ್ರಭುತ್ವಗಳೂ ವಿದ್ಯೆಯ/ಜ್ಞಾನದ ಮಹತ್ವವನ್ನು ಅರಿತು ಅವುಗಳನ್ನು ತಮ್ಮ ಆಡಳಿತದ ಕಕ್ಷೆಯ ಭಾಗವಾಗಿ ತರಲು ಯತ್ನಿಸಲಿಲ್ಲ. ಇದರಿಂದಾಗಿ ಅವುಗಳು ಸ್ವಾಯತ್ತ ಕಾಯಗಳಾಗಿದ್ದವು (ಆದರೆ ಧರ್ಮಗಳು ರಾಜಪ್ರಭುತ್ವಗಳನ್ನು ಬಳಸಿಕೊಂಡಿದ್ದು ಬೇರೆಯದೇ ಆದ ವಿಷಯ). ಧರ್ಮಗಳು ತಮ್ಮ ಅಳಿವಿಗಾಗಿ ಬೇರೆ ಧರ್ಮಗಳ, ಪಂಥಗಳ ವಿಚಾರಗಳನ್ನೂ ಅಧ್ಯಯನ ಮಾಡುತ್ತಿದ್ದವು. ತಮ್ಮದು ಉತ್ತಮವಾದದ್ದು ಎಂದು ನಿರೂಪಿಸಬೇಕಾದರೆ ಇತರರು ಏನು ಹೇಳುತ್ತಿದ್ದಾರೆ, ಏಕೆ ಹೇಳುತ್ತಿದ್ದಾರೆ, ಅದಕ್ಕೆ ಆಧಾರ/ಪ್ರಮಾಣ ಏನು ಎಂದು ಹೇಳುವುದೂ ಅಗತ್ಯವಾಗಿತ್ತು. ಇದರಿಂದ ಒಂದು ರೀತಿಯ ಅರೆ-ಧರ್ಮಾತೀತತೆ ಅವುಗಳಿಗೆ ದೊರಕಿತು.

ಬಂಡವಾಳದ ಉಗಮ, ರಾಷ್ಟ್ತ್ರೀಯತೆಯ ಗಾಳಿ, ವಸಾಹತೀಕರಣದ ಸಂದರ್ಭದಲ್ಲಿ ಇತರೆ ಜನರಿಂದ ಎದುರಾದ ಸವಾಲುಗಳು ಈ ಪ್ರಯತ್ನಗಳಿಗೆ ಮತ್ತಷ್ಟು ಧರ್ಮಾತೀತತೆಯ ಬಣ್ಣವನ್ನು ನೀಡಿದವು. ಧರ್ಮದ ಅಗತ್ಯಗಳೊಂದಿಗೆ ರಾಷ್ಟ್ತ್ರಗಳ ಅಗತ್ಯಗಳೂ, ಆರ್ಥಿಕಉದ್ಯಮಶೀಲತೆಯ ಅಗತ್ಯಗಳೂ ತಳುಕಿಹಾಕಿಕೊಂಡವು. ಆದರೆ ಇವತ್ತಿನ ವಿಶ್ವವಿದ್ಯಾಲಯಗಳು ಮೊದಲಿಗೆ ಕ್ರಿಶ್ಚಿಯನ್ಧರ್ಮದ ಭಾಗವೇ ಆಗಿದ್ದು ನಂತರ ಧರ್ಮಾತೀತವಾಗಿರುವುದು. ಆದ್ದರಿಂದ ಧರ್ಮಾತೀತ ಅಂದರೆ ಕೆಲವೊಮ್ಮೆ ಹಳೆಯ ಕ್ರಿಶ್ಚಿಯನ್ ಧರ್ಮದಿಂದ ಉದಾರವಾದ ನಿಲುವುಗಳನ್ನು ತಳೆಯುವುದು ಎಂಬ ಅರ್ಥ ಇದೆ.

ಅಧ್ಯಯನ ಶಿಸ್ತುಗಳು
ಕೇವಲ ಧರ್ಮಶಾಸ್ತ್ತ್ರ, ವ್ಯಾಕರಣ, ತರ್ಕ, ವೈದ್ಯಶಾಸ್ತ್ತ್ರ ಇವುಗಳೊಂದಿಗೆ ತಳುಕಿಹಾಕಿಕೊಂಡಿದ್ದ ವಿಶ್ವವಿದ್ಯಾಲಯಗಳಲ್ಲಿ ಇತರ ಅಧ್ಯಯನಶಾಸ್ತ್ತ್ರಗಳ ಹುಟ್ಟು ಮತ್ತು ಬೆಳವಣಿಗೆಯ ಪ್ರಕ್ರಿಯೆ ಆರಂಭವಾಯಿತು. ಆದರೆ ಈ ಕಥೆ ಅಷ್ಟು ಸುಲಭವಾದ ಕಥೆಯಲ್ಲ.

ಇವತ್ತು ಸಂಶೋಧನೆ ಎಂದರೆ ಹೊಸದನ್ನು ಕಂಡುಹಿಡಿಯುವುದು ಎಂದು ನಾವು ಯಾವುದನ್ನು ಹೇಳುತ್ತೇವೆ ಅದು ವಿಜ್ಞಾನಗಳಲ್ಲಿ ನಡೆಯುವ ಇನ್ವೆನ್ಷನ್ನಿಂದ ಬಂದಿರುವುದು. ಆದರೆ ಈ ವಿಜ್ಞಾನಗಳು ಮೊದಲಿಗೆ ಖಾಸಗಿ ಪ್ರಯತ್ನಗಳಾಗಿದ್ದವು, ವಿಶ್ವವಿದ್ಯಾಲಯಗಳಲ್ಲಿ ಇವುಗಳಿಗೆ ಜಾಗವಿರಲಿಲ್ಲ. ಹಳೆಯ ಇನ್ವೆನ್ಷನ್ಗಳಲ್ಲಿ ಬಹಳಷ್ಟು ವಿಜ್ಞಾನಿಗಳು ತಮ್ಮ ಆಸಕ್ತಿಯ ಫಲವಾಗಿ ಮಾಡಿದ ಸಾಧನೆಗಳೇ ಆಗಿವೆ. ವಿಜ್ಞಾನವು ನಂತರವಷ್ಟೇ ಬಹಳ ಪ್ರಯಾಸದಾಯಕವಾಗಿ ವಿಶ್ವವಿದ್ಯಾಲಯಗಳಲ್ಲಿ ಜಾಗ ಪಡೆಯಿತು. ಅದೇ ರೀತಿ ರಾಷ್ಟ್ತ್ರಗಳ, ಬಂಡವಾಳಶಾಹಿ/ ವಸಾಹತು ಉದ್ಯಮಶೀಲತೆಯ ಆರಂಭದೊಂದಿಗೆ ಅರ್ಥಶಾಸ್ತ್ತ್ರ, ತಮ್ಮ ಸಮಾಜವನ್ನು ಅಧ್ಯಯನ ಮಾಡುವುದಕ್ಕೆ ಸಮಾಜಶಾಸ್ತ್ತ್ರ, ತಮ್ಮದಲ್ಲದ ವಸಾಹತುಸಮಾಜಗಳನ್ನು ಅಧ್ಯಯನ ಮಾಡುವುದಕ್ಕೆ ಮಾನವಶಾಸ್ತ್ತ್ರ ಇತ್ಯಾದಿಗಳು ರೂಪುಗೊಂಡವು. ಈ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಅದೇ ರೀತಿ ಬಹಳಷ್ಟು ಸಿದ್ದಾಂತಗಳು (ಉದಾ. ಮಾರ್ಕ್ಸ್ವಾದ) ವಿಶ್ವವಿದ್ಯಾಲಯದ ಆಚೆ ರೂಪುಗೊಂಡು ನಂತರ ವಿಶ್ವವಿದ್ಯಾಲಯದೊಳಗೆ ಪ್ರವೇಶ ಪಡೆದಿವೆ.

ಆದರೆ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗಿ, ಅವುಗಳನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಒಡೆದುಕೊಂಡು ಮತ್ತೆ ಅವುಗಳಿಗೆ ಉತ್ತರ ಹುಡುಕಲು ಹೋಗಿ, ನೂರಾರು ಅಧ್ಯಯನ ಶಿಸ್ತುಗಳನ್ನು ಆರಂಭಿಸಿ ಇಂದು ಯಾವುದೇ ಅರ್ಥಪೂರ್ಣವಾದ ಉತ್ತರಗಳನ್ನು ನೀಡುವಲ್ಲಿ ವಿಫಲವಾಗಿದ್ದೇವೆ ಎಂದು ವಿಶ್ವವಿದ್ಯಾಲಯಗಳು ಭಾವಿಸಲಾರಂಭಿಸಿವೆ. ನಾವು ಆಳವಾದ ಅಧ್ಯಯನಕ್ಕಾಗಿ ಎಳೆದುಕೊಂಡ ಗೆರೆಗಳು ತಮಗೆ ಇಂದು ಮುಳುವಾಗಿರುವುದನ್ನು ಗುರುತಿಸಲಾರಂಭಿಸಿವೆ. ಇದಕ್ಕಾಗಿ ಇಂದು ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಅಧ್ಯಯನಗಳ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಇವುಗಳ ನಡುವಿನ ವ್ಯತ್ಯಾಸಗಳೇನು? ಶಿಸ್ತಿನ ಲಕ್ಷಣಗಳೇನು? ವ್ಯಾಖ್ಯಾನವೇನು? ಎನ್ನುವ ಪ್ರಶ್ನೆಗಳು ಚರ್ಚೆಗೆ ಒಳಪಟ್ಟಿವೆ. ಇವುಗಳನ್ನು ಇಲ್ಲಿ ವಿವರಿಸಲು ಹೋಗುವುದಿಲ್ಲ.

ಸತ್ಯದ ಸಮಸ್ಯೆ-ಜ್ಞಾನದ/ಅರಿವಿನ/ತಿಳುವಳಿಕೆಯ ಉತ್ಪಾದನೆಯ ನೆಲೆ
ಆದರೆ ಇಂದು ಬಹಳಷ್ಟು ಸಿದ್ದಾಂತಗಳು ಸತ್ಯವೆನ್ನುವ ಪರಿಕಲ್ಪನೆಯನ್ನು ಬಹಳ ಆಳವಾದ ಪರೀಶೀಲನೆಗೆ ಒಡ್ಡಿವೆ. ಸತ್ಯವನ್ನು ಆತ್ಯಂತಿಕವಾಗಿ ಭಾವಿಸುವುದು ಎಷ್ಟು ಸಮಸ್ಯಾತ್ಮಕವಾದದ್ದು ಎನ್ನುವುದನ್ನು ಅವು ನಮ್ಮ ಮುಂದೆ ಇಟ್ಟಿವೆ. ಆದ್ದರಿಂದ ನಾವು ಸಂಶೋಧನೆಯನ್ನು ವ್ಯಾಖ್ಯಾನಿಸುವಾಗ ಈ ಪರಿಕಲ್ಪನೆಯನ್ನು ಬಳಸುವುದು ಸಾಧ್ಯವಾಗಲಾರದು. ಹಾಗಾದರೆ ಸಂಶೋಧನೆಯನ್ನು ವ್ಯಾಖ್ಯಾನಿಸುವುದು ಹೇಗೆ ಎಂಬ ಪ್ರಶ್ನೆ ಮತ್ತೆ ಉಳಿಯುತ್ತದೆ. ಇತ್ತೀಚೆಗೆ ಜ್ಞಾನ/ಅರಿವು/ತಿಳುವಳಿಕೆಯನ್ನು ನೀಡುವುದು ಸಂಶೋಧನೆ ಎನ್ನಲಾಗುತ್ತಿದೆ. ಸಂಶೋಧನೆಯ ಮೂಲಕ ನಾವು ಜ್ಞಾನವನ್ನು ಯಾವುದೇ ವಿಷಯದ ಬಗ್ಗೆ ಉತ್ಪಾದಿಸುತ್ತೇವೆ. ಇದಕ್ಕೆ ಪ್ರತಿಯಾಗಿ ಕೆಲವರು ಕೆಲವು ಪ್ರಶ್ನೆಗಳನ್ನು ಕೇಳಬಹುದು: ಸಂಶೋಧನೆ ಮಾಡಿದವರಿಗೆ ಮಾತ್ರ ಜ್ಞಾನ ಇರುತ್ತದೆ, ಇತರರಿಗೆ ಇರುವುದಿಲ್ಲ ಎಂದೇ? ಅಥವಾ ಸಂಶೋಧನೆಯೇತರ ಜ್ಞಾನ/ತಿಳುವಳಿಕೆ/ಅರಿವು ಇರುವುದಿಲ್ಲ ಎಂದೇ? ಈ ಪ್ರಶ್ನೆಗಳಿಗೆ ಉತ್ತರ ನಕಾರಾತ್ಮಕವಾದ್ದು.

ಅಂದರೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಶಿಸ್ತಿನ ಚೌಕಟ್ಟಿನಲ್ಲಿ, ತರ್ಕಬದ್ಧವಾಗಿ, ವ್ಯವಸ್ಥಿತವಾಗಿ ನಡೆಯುವ ಅಧ್ಯಯನಗಳು ಮಾತ್ರ ಜ್ಞಾನ/ಅರಿವು/ತಿಳುವಳಿಕೆ ನೀಡುತ್ತವೆ ಎಂದಲ್ಲ. ಅವುಗಳ ಆಚೆಗೂ ಹಿಂದೆ ಹೇಳಿದಂತೆ ಜ್ಞಾನದ ಉತ್ಪಾದನೆಯಾಗುತ್ತದೆ. ಅವುಗಳೂ ತರ್ಕಬದ್ಧವಾಗಿದ್ದರೆ, ವ್ಯವಸ್ಥಿತವಾದ ಅಧ್ಯಯನದಲ್ಲಿಯೂ ಅವು ಮತ್ತೆ ಸಾಬೀತಾದರೆ ಅವೂ ಸಂಶೋಧನೆಯಲ್ಲಿ ಜಾಗ ಪಡೆಯುತ್ತವೆ. ಆದರೆ ಈ ಪ್ರಶ್ನೆಗಳಿಗೆ ಮತ್ತಷ್ಟು ಆಯಾಮಗಳಿವೆ ಅವುಗಳನ್ನೂ ವಿವರಿಸಿಕೊಳ್ಳುವುದು ಅಗತ್ಯ.

ಮಾಡಿ ಕಲಿ, ನೋಡಿ ಕಲಿ
ತಿಳುವಳಿಕೆ/ಅರಿವು/ಜ್ಞಾನ ಇವುಗಳು ಹೇಗೆ ಬರುತ್ತವೆ ಎಂಬ ಮೂಲಭೂತ ಪ್ರಶ್ನೆ ಇಲ್ಲಿದೆ. ಯಾವುದೇ ತರ್ಕವಿಲ್ಲದೆ, ವ್ಯವಸ್ಥಿತವಾಗಿಲ್ಲದೆ ಇದ್ದರೂ ಕೆಲವೊಮ್ಮೆ ಕೆಲವು ತತ್ವಗಳು ನಮ್ಮ ಅರಿವಿಗೆ ಬರಬಹುದಲ್ಲವೇ? ಹೌದು. ಅನುಭವದ ಆಧಾರದ ಮೇಲೆ ನಮಗೆ ತಿಳುವಳಿಕೆ ದೊರೆಯುತ್ತದೆ. ದೀಪದ ಉರಿಯಲ್ಲಿ ನಮ್ಮ ದೇಹದ ಯಾವುದಾದರು ಭಾಗವನ್ನು ಇಟ್ಟರೆ ನಮಗೆ ಸುಡುವ ಅನುಭವವಾಗುತ್ತದೆ. ಇದನ್ನು ನಾವು ಅನುಭವದ ಮೂಲಕ ಕಂಡುಕೊಳ್ಳಬಹುದು. ಆದರೆ ಪ್ರತಿಯೊಂದನ್ನು ಅನುಭವದ ಮೂಲಕವೇ ಕಂಡುಕೊಳ್ಳುವುದಾದರೆ ಒಬ್ಬರ ಜೀವಿತಾವಧಿಯಲ್ಲಿ ಆ ವ್ಯಕ್ತಿ ಹೆಚ್ಚಿನ ಅರಿವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅಂದರೆ ನಾವು ಬೇರೆಯವರ ಅನುಭವದಿಂದಲೂ ಅರಿವನ್ನು ಪಡೆಯಲು ಸಾಧ್ಯವಿದೆ. ನಾನು ಉರಿಯಲ್ಲಿ ಕೈ ಹಿಡಿಯದೆಯೇ ಕೈ ಇಟ್ಟರೆ ಸುಡುತ್ತದೆ ಎಂದು ತಿಳುವಳಿಕೆ ಪಡೆಯಲು ಸಾಧ್ಯ. ಇವುಗಳು ಮಾಡಿಕಲಿ ಮತ್ತು ನೋಡಿ ಕಲಿ ವಿಧಾನಗಳು. ಆದರೆ ಇವುಗಳಷ್ಟೇ ಜ್ಞಾನವನ್ನು ಪಡೆಯುವ ವಿಧಾನಗಳಲ್ಲ. ನಾನು ಅನುಭವಿಸದೆ, ನೋಡದೆ ಕಲಿಯಲು ಸಾಧ್ಯವಿಲ್ಲವೆ? ಇಲ್ಲಿಯೇ ಜ್ಞಾನದ ಮುಖ್ಯವಾದ ಪ್ರಶ್ನೆಗಳಿರುವುದು. ಇಲ್ಲಿಯೇ ವ್ಯವಸ್ಥಿತವಾದ ಅಧ್ಯಯನ ಎಂಬ ಪ್ರಶ್ನೆ ಮುಖ್ಯವಾಗುವುದು.

ಓದಿ ಕಲಿ-ಜ್ಞಾನ ಮತ್ತು ಭಾಷೆ
ಇಲ್ಲಿ ಭಾಷೆಯ ಪ್ರಶ್ನೆ ಮುಖ್ಯವಾಗುತ್ತದೆ. ಅಂದರೆ ನಾವು ನೋಡಿಲ್ಲದ, ಅನುಭವಿಸಿಲ್ಲದ ವಿಷಯಗಳ ಬಗೆಗಿನ ತಿಳುವಳಿಕೆಯನ್ನು ಬೇರೆ ಯಾರಾದರು ಭಾಷೆಯಲ್ಲಿ ಹಿಡಿದಿಟ್ಟರೆ ಅದನ್ನು ನಾವು ಅರ್ಥಮಾಡಿಕೊಂಡರೆ ಆಗ ಸಹ ನಮಗೆ ಜ್ಞಾನ ಸಿಗುತ್ತದೆ. ಅಂದರೆ ಕೇಳಿ ಕಲಿ, ಓದಿ ಕಲಿ. ಅಂದರೆ ಭಾಷೆಯಮೂಲಕ ಮಾತ್ರ ನಮಗೆ ಜ್ಞಾನ ದೊರೆಯುತ್ತದೆ. ಈ ಭಾಷೆಯೇ ಮನುಷ್ಯಪ್ರಾಣಿಯನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿಸಿರುವುದು. ಈ ಕಾರಣಕ್ಕಾಗಿಯೇ ತತ್ವಶಾಸ್ತ್ತ್ರದಲ್ಲಿ ಮೊದಲಿಗೆ ಇದ್ದ ಶಾಖೆಗಳಲ್ಲಿ ವ್ಯಾಕರಣ (ಗ್ರಾಮರ್) ಮತ್ತು ಭಾಷಾಬಳಕೆಯಶಾಸ್ತ್ತ್ರ (ರೆಟೊರಿಕ್, ಕನ್ನಡದಲ್ಲಿ ರೆಟೊರಿಕ್ಅನ್ನು ಈ ಮೊದಲಿಗೆ ಕೇವಲ ಲಿಭಾಷಣ ಕಲೆಳಿ ಎಂದು ಮಾತ್ರ ಅರ್ಥಮಾಡಿಕೊಂಡು ಭಾಷಾಂತರಿಸಲಾಗಿದೆ/ಪದವನ್ನು ಟಂಕಿಸಲಾಗಿದೆ) ಪ್ರಮುಖವಾಗಿದ್ದವು.

ನಾವು ನೋಡಿದ, ಅನುಭವಿಸಿದ, ಕೇಳಿದ, ಅಧ್ಯಯನ ಮಾಡಿ ಕಲಿತ ವಿಷಯಗಳನ್ನು ನಾವು ಬೇರೆಯವರಿಗೆ (ಮುಂದಿನ ಪೀಳಿಗೆಯವರಿಗೂ ಸೇರಿ) ತಿಳಿಸಬೇಕಾದರೆ ಆ ತಿಳುವಳಿಕೆಯನ್ನು ನಾವು ಭಾಷೆಯಲ್ಲಿ ಹಿಡಿದಿಡಬೇಕಾಗುತ್ತದೆ. ಬೇರೆ ಕಾಲ, ದೇಶದವರಿಗೆ ಅರ್ಥವಾಗುವಂತೆ, ಮನದಟ್ಟಾಗುವಂತೆ ಅದು ಭಾಷೆಯಲ್ಲಿ ನಿರೂಪಿತವಾಗಬೇಕಾಗುತ್ತದೆ. ಆಗ ಮಾತ್ರ ಅದು ಜ್ಞಾನವಾಗುತ್ತದೆ. ನನ್ನ ತಿಳುವಳಿಕೆ/ಅರಿವು/ಜ್ಞಾನ ಭಾಷೆಯನ್ನು ಪ್ರವೇಶಿಸದಿದ್ದಲ್ಲಿ ಅದು ಬೇರೆಯವರ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ನಾವು ಪಡೆದ ಜ್ಞಾನ ಏನು, ಹೇಗೆ ಪಡೆದೆವು, ಪಡೆದ ವಿಧಾನ ಯಾವುದು ಇತ್ಯಾದಿಗಳು ಭಾಷೆಯಲ್ಲಿ ಬರಬೇಕಾಗುತ್ತದೆ. ಇಲ್ಲಿಯೇ ಜ್ಞಾನದ ಮುಖ್ಯವಾದ ಪ್ರಶ್ನೆಗಳಿರುವುದು. ಇಲ್ಲಿಯೇ ವ್ಯವಸ್ಥಿತವಾದ ಅಧ್ಯಯನ ಎಂಬ ಪ್ರಶ್ನೆ ಮುಖ್ಯವಾಗುವುದು.

ಡೆಸರ್ಟೇಶನ್-ಥೀಸಿಸ್
ಈ ಎರಡು ಪದಗಳನ್ನು ನಮ್ಮ ವಿದ್ಯಾರ್ಥಿಗಳು ಮತ್ತು ಇತರರೂ ಸಹ ಸಮಾನಾರ್ಥಕವಾದ ಪದಗಳಾಗಿ ಬಳಸುತ್ತಾರೆ. ಆದರೆ ಇವುಗಳೆರಡರ ನಡುವಿನ ವ್ಯತ್ಯಾಸ ಸಹ ನಮಗೆ ಮುಖ್ಯವಾಗಬೇಕಾಗುತ್ತದೆ. ಥೀಸಿಸ್ ಎನ್ನುವುದು ನಾವು ನಮ್ಮ ಅಧ್ಯಯನದ ಮೂಲಕ ಕಂಡುಕೊಂಡ ಫಲಿತ, ಅದನ್ನು ಹೇಗೆ ಕಂಡುಕೊಂಡೆವು ಎಂದು ನೀಡುವ ವಿವರವಾದ ವರದಿಯೇ ಡೆಸರ್ಟೇಶನ್. ನಮ್ಮಲ್ಲಿ ಡೆಸರ್ಟೇಶನ್ ಬರೆಯುವದನ್ನೇ ಸಂಶೋಧನೆ ಎಂದು ಭಾವಿಸಿಕೊಳ್ಳಲಾಗಿದೆ. ಇದು ಹೆಚ್ಚಾಗಿ ಸಾಹಿತ್ಯದ ಅಧ್ಯಯನಗಳಲ್ಲಿ ಕಂಡುಬರುತ್ತದೆ. ನಾವು ಯಾವುದೋ ಪ್ರಯೋಗದ ಮೂಲಕವೋ, ಅಥವಾ ಕೆಲವು ಆಕರಗಳನ್ನು ವಿಶ್ಲೇಷಿಸಿಯೋ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಳ್ಳುತ್ತೇವೆ. ಈ ಇಡೀ ಪ್ರಕ್ರಿಯೆಯ ವರದಿಯೇ ಡೆಸರ್ಟೇಶನ್. ನಾವು ಸಂಶೋಧನೆಯನ್ನು ಏಕೆ ಆರಂಭಿಸಿದೆವು; ಏಕೆ ಈ ಪ್ರಶ್ನೆಗೇ ಉತ್ತರವನ್ನು ಹುಡುಕಲು ಯತ್ನಿಸಿದೆವು/ಅಥವಾ ಇದನ್ನೆ ಏಕೆ ಊಹಾಸಿದ್ದಾಂತವಾಗಿ ಪರೀಕ್ಷಿಸಿದೆವು; ಈ ವಿಷಯದ ಬಗ್ಗೆ ಇದುವರೆವಿಗೆ ಇರುವ ಜ್ಞಾನದ ಸ್ವರೂಪ ಯಾವುದು (ಲಿಟರೇಚರ್ ಸರ್ವೆ, ಇದುವರೆಗಿನ ಅಧ್ಯಯನಗಳ ಸಮೀಕ್ಷೆ); ನಾವು ನಡೆಸಿದ ಪ್ರಯೋಗ/ವಿಶ್ಲೇಷಣೆ ಯಾವುದು; ಯಾವುದನ್ನು ಆಕರವಾಗಿ, ಉಪಕರಣಗಳಾಗಿ ಬಳಸಿದೆವು, ಅವುಗಳ ವ್ಯಾಪ್ತಿ, ಪ್ರಮಾಣ ಏನು; ಇವುಗಳ ಹಿಂದೆ ಕೆಲಸ ಮಾಡಿದ ಸಿದ್ದಾಂತ ಯಾವುದು; ನಾವು ಬಳಸಿದ ವಿಧಾನಗಳಾವುವು; ಏಕೆ ಅವುಗಳನ್ನೇ ಬಳಸಿದೆವು ಇತ್ಯಾದಿ. ವಿವರಗಳನ್ನು ನಾವು ಡೆಸರ್ಟೇಶನ್ನಲ್ಲಿ ನೀಡಬೇಕಾಗುತ್ತದೆ.

ಜ್ಞಾನದಷ್ಟೇ ಜ್ಞಾನದ ಮಾರ್ಗವೂ ಮುಖ್ಯ
ಇದೇ ಜ್ಞಾನ ಎಂದು ಹೇಳಬೇಕಾದರೆ ಆ ನಿರ್ಧಾರಕ್ಕೆ ನಾವು ಹೇಗೆ ಬಂದೆವು, ಏಕೆ ಬಂದೆವು ಎಂಬುದನ್ನು ಹೇಳಬೇಕಾಗುತ್ತದೆ. ಈ ವಿವರಗಳನ್ನು ಅದೇ ಕ್ಷೇತ್ರದಲ್ಲಿ ನುರಿತ ತಜ್ಞರು ಪರೀಶೀಲಿಸಿ ವ್ಯವಸ್ಥಿತವಾಗಿ ಅಧ್ಯಯನ ನಡೆದಿದೆಯೇ ಇಲ್ಲವೇ ಎಂದು ಹೇಳಬೇಕಾಗುತ್ತದೆ. ಆಗ ಮಾತ್ರ ಅದನ್ನು ವಿಶ್ವವಿದ್ಯಾಲಯಗಳು ಮಾನ್ಯ ಮಾಡಲು ಸಾಧ್ಯ. ಇಲ್ಲದಿದ್ದರೆ ಬೇರೊಬ್ಬರು ನೀವು ಹೇಳಿದ್ದನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ. ಪರೀಕ್ಷಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ವ್ಯವಸ್ಥಿತವಾದ ಅಧ್ಯಯನ ಮುಖ್ಯವಾಗುತ್ತದೆ. ಹಾಗೆಂದ ಮಾತ್ರಕ್ಕೆ ಹಿಂದೆ ಹೇಳಿದಂತೆ ಇತರೆ ಯಾವುದೇ ವ್ಯವಸ್ಥಿತವಾದ ಅಧ್ಯಯನಗಳನ್ನು ಮಾಡದಿರುವವರು ಜ್ಞಾನದ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದಲ್ಲ. ಅವರು ತಾವು ಆ ಜ್ಞಾನವನ್ನು ತಲುಪಿದ ಮಾರ್ಗವನ್ನು ಸ್ಪಷ್ಟಪಡಿಸಿದರೆ ಪರೀಕ್ಷಿಸಲು ಅಥವಾ ಅದನ್ನು ಮುಂದುವರೆಸಲು ಸಾಧ್ಯವಿದೆ.

ಉದಾಹರಣೆ ನೀಡಿದರೆ ಇದು ಸ್ಪಷ್ಟವಾಗಬಹುದು. ಅಕಸ್ಮಾತ್ಆಗಿ ಏನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಎರಡು ರಾಸಾಯನಿಕಗಳನ್ನು ತಪ್ಪಿ ಬಳಸಿದಾಗ ಮತ್ತೇನೋ ಉಪಯುಕ್ತವಾದದ್ದು ಆಗಬಹುದು. ಆದರೆ ಅದು ನಮಗೆ ಹೊಳಹನ್ನು ಮಾತ್ರ ನೀಡುತ್ತದೆ. ಅದನ್ನು ಮತ್ತೆ ಪರೀಕ್ಷಿಸಬೇಕಾಗುತ್ತದೆ. ಅವುಗಳನ್ನು ಯಾವ ಪ್ರಮಾಣದಲ್ಲಿ ಬೆರೆಸಬೇಕು, ಯಾವ ತಾಪಮಾನದಲ್ಲಿ ಬೆರಸಬೇಕು ಇತ್ಯಾದಿ ಅಂಶಗಳನ್ನು ಮುಂದಿನ ಸಂಶೋಧನೆ ನಿರ್ಧರಿಸಬೇಕಾಗಿರುವುದರಿಂದ ವ್ಯವಸ್ಥಿತವಾದ ಅಧ್ಯಯನದ ಅಗತ್ಯವಿರುತ್ತದೆ. ನಾನು ಹಿಡಿದ ಮಾರ್ಗಗಳನ್ನು ಸ್ಪಷ್ಟಪಡಿಸುವುದು ಅಗತ್ಯವಿರುತ್ತದೆ. ಏಕೆಂದರೆ ಬೇರೊಂದು ಮಾರ್ಗವನ್ನು ಹಿಡಿದರೆ ಬೇರೆ ಫಲಿತ ಕಾಣಲು ಸಾಧ್ಯವಿರುತ್ತದೆ.

ಮಾರ್ಗದ ಪ್ರಶ್ನೆ-ಎಪಿಸ್ಟಮಾಲಜಿ, ಸಿದ್ದಾಂತ, ವಿಧಾನ, ಆಕರಗಳು ಇತ್ಯಾದಿ.
ತತ್ವಶಾಸ್ತ್ತ್ರದಲ್ಲಿ ಎಪಿಸ್ಟಮಾಲಜಿ ಎಂಬುದೊಂದಿದೆ. ಇದು ಜ್ಞಾನಶಾಸ್ತ್ತ್ರ (ಕನ್ನಡದಲ್ಲಿ ಇದಕ್ಕೆ ಮುಂಚೆ ಪ್ರಮಾಣಶಾಸ್ತ್ತ್ರ ಎಂದೂ ಬಳಸಲಾಗಿದೆ). ಯಾವುದನ್ನು ಜ್ಞಾನ ಎಂದು ಒಪ್ಪಿಕೊಳ್ಳಬೇಕು, ಒಪ್ಪಿಕೊಳ್ಳುವುದಕ್ಕೆ ಪ್ರಮಾಣ ಏನು ಎಂಬುದನ್ನು ಇದು ಹೇಳುತ್ತದೆ. ನೀವು ಯಾವ ಎಪಿಸ್ಟಮಾಲಜಿಯ ಚೌಕಟ್ಟನ್ನು ಒಪ್ಪಿಕೊಳ್ಳುತ್ತೀರಾ ಎಂಬುದರ ಮೇಲೆ ನೀವು ಯಾವುದನ್ನು ಪ್ರಮಾಣ ಎಂದು ಒಪ್ಪಿಕೊಳ್ಳುತ್ತೀರಾ ಮತ್ತು ನೀವು ತಲುಪುವ ನಿರ್ಧಾರ ಯಾವುದು ಎಂಬುದು ತೀರ್ಮಾನಗೊಳ್ಳುತ್ತದೆ. ಆದ್ದರಿಂದ ಸಂಶೋಧಕರು ತಾವು ಬಳಸುತ್ತಿರುವ ಜ್ಞಾನಶಾಸ್ತ್ತ್ರೀಯ ಚೌಕಟ್ಟು ಯಾವುದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಮತ್ತು ಅದರ ಬಗೆಗೆ ಅರಿವಿರಬೇಕಾಗುತ್ತದೆ. ಭಾರತದ ಷಡ್ದರ್ಶನಗಳೆಂದು ಯಾವುದನ್ನು ಕರೆಯುತ್ತಾರೆ ಅವುಗಳ ನಡುವಿನ ವ್ಯತ್ಯಾಸಗಳೂ ಎಪಿಸ್ಟಮಾಲಜಿಕಲ್ ವ್ಯತ್ಯಾಸಗಳಾಗಿದ್ದವು.

ಸಿದ್ದಾಂತ
ಈಗಾಗಲೇ ಹಲವು ರೀತಿಯ ಸಂಗತಿಗಳನ್ನು ಪರೀಕ್ಷಿಸಿ ಸಾಮಾನ್ಯವಾಗಿ ಎಲ್ಲದಕ್ಕೂ ಒಪ್ಪಿತವಾಗುವ ನಿಯಮವೊಂದನ್ನು ರೂಪಿಸಿರುವದೇ ಸಿದ್ದಾಂತ. ಇದನ್ನು ಬಳಸಿ ಮತ್ತೆ ನಾವು ಎಲ್ಲವನ್ನೂ ಕೂಲಂಕುಷವಾಗಿ ಪರೀಶೀಲಿಸದೆ ಕೇವಲ ಅನ್ವಯಿಸಿ ನಿರ್ಧಾರಕ್ಕೆ ಬರಬಹುದು. ಈ ರೀತಿ ಆನ್ವಯಿಕ ಅಥವಾ ಆ ಸಿದ್ದಾಂತದ ಚೌಕಟ್ಟಿನಲ್ಲೇ ಮುಂದುವರೆಸಿ ಸಂಶೋಧನೆ ಮಾಡುವುದಾದರೆ ಸಿದ್ದಾಂತವನ್ನು ನಾವು ಬಳಸುತ್ತೇವೆ. ಇದು ಎಪಿಸ್ಟಮಾಲಜಿಕಲ್ ಚೌಕಟ್ಟನ್ನು ನಿರ್ಧರಿಸಿದ ನಂತರದ ಹಂತ. ಒಂದು ಸಂಗತಿಯನ್ನು ಕುರಿತು ಒಂದೇ ಎಪಿಸ್ಟಮಾಲಜಿಕಲ್ ಚೌಕಟ್ಟಿನಲ್ಲಿ ಹಲವು ಸಿದ್ದಾಂತಗಳಿರಬಹುದು. ಉದಾಹರಣಗೆ ಉದಾರವಾದಿ ಸಿದ್ದಾಂತ ಮತ್ತು ಮಾರ್ಕ್ಸ್ವಾದಿ ಸಿದ್ದಾಂತಗಳು ಒಂದೇ ಎಪಿಸ್ಟಮಾಲಜಿಕಲ್ ಚೌಕಟ್ಟನ್ನು ಹೊಂದಿದ್ದರೂ ಅವುಗಳು ಸಂಗತಿಗಳನ್ನು ಪ್ರಕ್ರಿಯೆಗಳನ್ನು ಗ್ರಹಿಸುವ/ತೀರ್ಮಾನಿಸುವ ರೀತಿ ಬೇರೆಯಾಗಿರುತ್ತದೆ. ಆದ್ದರಿಂದ ಸಂಶೋಧಕರಿಗೆ ತಾವು ಯಾವ ಸಿದ್ದಾಂತವನ್ನು ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಅರಿವಿರಬೇಕಾಗುತ್ತದೆ. ಇವತ್ತು ಹೆಚ್ಚಿನ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ವಿಭಿನ್ನ ಸಿದ್ದಾಂತಗಳ ಹಿನ್ನಲೆಯಲ್ಲಿನ ವಿಚಾರಗಳನ್ನು ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ತಮ್ಮ ವರದಿಯಲ್ಲಿ ತಮ್ಮ ನಿರ್ಧಾರದ ಬೆಂಬಲಕ್ಕೆ ಉಲ್ಲೇಖಿಸುತ್ತಾರೆ. ಈ ಸಮಸ್ಯೆಗೆ ಕಾರಣವೇನೆಂದರೆ ಅವರಿಗೆ ವಿಭಿನ್ನ ಸಿದ್ದಾಂತಗಳ ಅರಿವಿಲ್ಲದಿರುವುದು, ಇದ್ದರೂ ಕೇವಲ ಅವುಗಳನ್ನು ಸಿದ್ದಾಂತವಾಗಿ ಮಾತ್ರ ಗ್ರಹಿಸಿರುವುದರಿಂದ, ತಾವು ಅವಲಂಬಿಸುವ ನಿರ್ಧಾರಗಳ ಹಿಂದೆ ಯಾವ ಸಿದ್ದಾಂತ ಕೆಲಸ ಮಾಡಿದೆ ಎಂಬುದನ್ನು ಗ್ರಹಿಸುವಲ್ಲಿ ವಿಫಲರಾಗುತ್ತಾರೆ.

ವಿಧಾನ
ವಿಧಾನದ ಪ್ರಶ್ನೆಯೂ ಸಂಶೋಧನೆಯಲ್ಲಿ ಬಹಳ ಮುಖ್ಯವಾದದ್ದು. ನಾವು ಯಾವ ಆಕರಗಳನ್ನು ಬಳಸಿ ಅವುಗಳ ವಿಶ್ಲೇಷಣೆಯ ಮೂಲಕ ನಾವು ಹಾಕಿಕೊಂಡಿದ್ದ ಸಂಶೋಧನಾ ಪ್ರಶ್ನೆಗೆ ಉತ್ತರ ಹುಡುಕುತ್ತೇವೆ ಅವುಗಳನ್ನು ವಿಶ್ಲೇಷಿಸುವ ವಿಧಾನಕ್ಕೆ (ಮಾನವಿಕ ಮತ್ತು ಸಮಾಜವಿಜ್ಞಾನಗಳಲ್ಲಾದರೆ), ಯಾವ ಪರಿಕರಗಳನ್ನು ಬಳಸಿ ಪ್ರಯೋಗವನ್ನು ಮಾಡುತ್ತೇವೊ ಅದರ ವಿಧಾನಕ್ಕೆ ನಾವು ಗಮನ ನೀಡಬೇಕಾಗುತ್ತದೆ. ನಾವು ಭಿನ್ನ ವಿಧಾನಗಳನ್ನು ಬಳಸಿದರೆ ಭಿನ್ನ ತೀರ್ಮಾನಕ್ಕೆ ತಲುಪಲು ಸಾಧ್ಯವಿರುತ್ತದೆ. ಇನ್ನೊಂದು ಅಂಶವನ್ನು ನಾವು ಗಮನಿಸಬೇಕಾದದ್ದು ಏನೆಂದರೆ, ವಿಧಾನಗಳ ಹಿಂದೆ ಸಿದ್ದಾಂತಗಳು ಕೆಲಸ ಮಾಡುತ್ತಿರುತ್ತವೆ. ನಾನು ಹಾಕಿಕೊಂಡ ಸೈದ್ದಾಂತಿಕ ಚೌಕಟ್ಟಿಗೆ ಅನುಗುಣವಾಗಿ ನಮ್ಮ ವಿಧಾನವಿರಬೇಕಾಗುತ್ತದೆ. ಒಂದೇ ಸಿದ್ದಾಂತದ ಅಡಿಯಲ್ಲಿ ಭಿನ್ನ ವಿಧಾನಗಳಿರಲು ಸಾಧ್ಯ. ಏಕೆಂದರೆ ಕೆಲವೊಮ್ಮೆ ಆಕರಗಳು/ಪರಿಕರಗಳಿಗೆ ಅನುಗುಣವಾಗಿ ವಿಧಾನವೂ ಬದಲಾಗಬೇಕಾಗುತ್ತದೆ. ಉದಾಹರಣೆಗೆ, ಒಂದು ಕವನವನ್ನು ವಿಶ್ಲೇಷಿಸುವ ವಿಧಾನಕ್ಕೂ, ಆತ್ಮಚರಿತ್ರೆಯನ್ನು ವಿಶ್ಲೇಷಿಸುವ ವಿಧಾನಕ್ಕೂ, ಒಂದು ಕಾದಂಬರಿಯನ್ನು ವಿಶ್ಲೇಷಿಸುವ ವಿಧಾನಕ್ಕೂ, ಮೌಖಿಕ ಕಾವ್ಯವನ್ನು ವಿಶ್ಲೇಷಿಸುವ ವಿಧಾನಕ್ಕೂ, ಭಾಷಣವನ್ನು ವಿಶ್ಲೇಷಿಸುವ ವಿಧಾನಕ್ಕೂ ವ್ಯತ್ಯಾಸವಿರುತ್ತದೆ. ಮತ್ತು ಒಂದೇ ಪ್ರಕಾರವನ್ನು (ಈ ಸಾಹಿತ್ಯ ಆಕರಗಳ ಉದಾಹರಣೆಯಲ್ಲಿ) ವಿಶ್ಲೇಷಿಸುವುದಕ್ಕೆ ಭಿನ್ನ ವಿಧಾನಗಳಿರಲು ಸಾಧ್ಯ. ಈ ವ್ಯತ್ಯಾಸ ಸಿದ್ದಾಂತ ಮತ್ತು ಎಪಿಸ್ಟಮಾಲಜಿಯನ್ನು ಅವಲಂಬಿಸಿರುತ್ತದೆ.

ಪ್ರಾಕಲ್ಪನೆ/ಊಹಾ ಸಿದ್ದಾಂತ-ಸಂಶೋಧನಾ ಪ್ರಶ್ನೆ
ಸಾಮಾನ್ಯವಾಗಿ ಸಂಶೋಧನೆ ಮಾಡಲು ಹೈಪಾಥಿಸಿಸ್ (ಕನ್ನಡದಲ್ಲಿ ಇದನ್ನು ಊಹಾಸಿದ್ದಾಂತವೆಂದು ಕೆಲವರು, ಮತ್ತೆ ಕೆಲವರು ಪ್ರಾಕಲ್ಪನೆ ಎಂದು ಭಾಷಾಂತರಿಸಿದ್ದಾರೆ) ಇರಬೇಕೆಂದು ಹೇಳುತ್ತಾರೆ. ಬಹಳಷ್ಟು ಸಂಶೋಧನೆ ಎಂದರೇನೆಂದು ಹೇಳಿಕೊಡುವ ಪುಸ್ತಕಗಳಲ್ಲೂ ಈ ಅಂಶ ಪ್ರಸ್ತಾಪವಾಗುತ್ತದೆ. ಇದು ಸಾಮಾನ್ಯವಾಗಿ ವಿಜ್ಞಾನವಿಷಯಗಳಲ್ಲಿ ಸಂಶೋಧನೆ ನಡೆಸುವಾಗ ಬಳಕೆಯಾಗುವ ಪರಿಭಾಷೆ. ಅಲ್ಲಿ ಪ್ರಯೋಗದ ಆರಂಭಕ್ಕೆ ಮುನ್ನವೇ ಈ ಪರಿಕರಗಳನ್ನು ಈ ವಿಧಾನದಲ್ಲಿ ಪ್ರಯೋಗಿಸಿದಾಗ ಈ ಕಾಲಾವಧಿಯಲ್ಲಿ, ನಿರ್ದಿಷ್ಟವಾದ ಕೆಲವು ಅಂಶಗಳು ಕಾನ್ಸ್ಟಂಟ್(ತಟಸ್ಥ/ಬದಲಾಗದಿದ್ದರೆ) ಆಗಿದ್ದರೆ ಈ ರೀತಿಯ ಫಲಿತ ದೊರೆಯುತ್ತದೆ ಎಂದು ಭಾವಿಸಲಾಗುತ್ತದೆ. ನಂತರ ಅದನ್ನು ಪರೀಕ್ಷಿಸಲಾಗುತ್ತದೆ. ಪ್ರಯೋಗ ಯಶಸ್ವಿಯಾದರೂ ಅದು ಜ್ಞಾನವೇ, ಯಶಸ್ವಿಯಾಗದಿದ್ದರೂ ಅದು ಜ್ಞಾನವೇ. ಆ ರೀತಿ ಮಾಡುವುದರಿಂದ ನೀರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ ಎಂದು ತೀರ್ಮಾನಕ್ಕೆ ಬರುವುದೂ ಕೂಡ ಜ್ಞಾನವೇ.

ಆದರೆ ಸಮಾಜವಿಜ್ಞಾನಗಳಲ್ಲಿ ಮತ್ತು ಮಾನವಿಕಗಳಲ್ಲಿ ಈ ರೀತಿಯ ಊಹೆ, ಕಲ್ಪನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಪ್ರಯೋಗ ನಡೆಸಲಾಗುವುದಿಲ್ಲ, ಮತ್ತು ಸಾಮಾಜಿಕ, ರಾಜಕೀಯ, ಚಾರಿತ್ರಿಕ, ವ್ಯಕ್ತಿಗತ, ಮಾನಸಿಕ ಅಂಶಗಳನ್ನು ಬದಲಾಗದಂತೆ, ತಟಸ್ಥಗೊಳಿಸಲು ಬರುವುದಿಲ್ಲ. ಆದ್ದರಿಂದ ಇಲ್ಲಿ ಊಹಾಸಿದ್ದಾಂತ ಅಥವಾ ಪ್ರಾಕಲ್ಪನೆ ಎಂಬ ಪರಿಕಲ್ಪನೆಯ ಬದಲಾಗಿ ಸಂಶೋಧನಾ ಪ್ರಶ್ನೆ ಎಂಬುದನ್ನು ಬಳಸುವುದು ಉಪಯುಕ್ತವಾಗುತ್ತದೆ. ಏಕೆ ಕರಾವಳಿ ಪ್ರದೇಶಗಳಲ್ಲಿ ಸಾಮುದಾಯಿಕ ಘರ್ಷಣೆಗಳು ಹೆಚ್ಚಾಗುತ್ತಿವೆ?; ಕನ್ನಡ ಸುದ್ದಿ ಮಾಧ್ಯಮಗಳ ಭಾಷೆಯಲ್ಲಿ ಗಮನಾರ್ಹ ಪಲ್ಲಟವಾಗುತ್ತಿದೆಯೇ? ಏಕೆ? ಅದರ ಪರಿಣಾಮಗಳೇನು?; ಭಾರತದಲ್ಲಿ ಕಪ್ಪುಹಣದ ಪರಿಮಾಣವನ್ನು ಮತ್ತು ಪರಿಣಾಮವನ್ನು ಅಳೆಯಲು ಸಾಧ್ಯವೇ? ಕನ್ನಡ ಬ್ಲಾಗ್ಗಳ ಆರಂಭವು ಕನ್ನಡ ಗುರುತಿನ ಮೇಲೆ, ಅದನ್ನು ನಾವು ಪರಿಭಾವಿಸಿಕೊಂಡಿರುವುದರ ಮೇಲೆ ಬೀರುವ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳನ್ನು ರೂಪಿಸಿಕೊಂಡು ಸಂಶೋಧನೆಯ ಮೂಲಕ ನಾವು ಉತ್ತರವನ್ನು ಹುಡುಕಿ ಜ್ಞಾನವನ್ನು ಉತ್ಪಾದಿಸಲು ಸಾಧ್ಯ. ಆದ್ದರಿಂದ ನನ್ನ ದೃಷ್ಟಿಯಲ್ಲಿ ನಾವು ಬಳಸುವ ಸಂಶೋಧನೆ ಎಂದು ಹೇಳುವ ಪುಸ್ತಕಗಳಲ್ಲಿ ಸಾಮಾನ್ಯವಾಗಿ ಕಾಣುವ ಉಹಾಸಿದ್ದಾಂತ, ಪ್ರಾಕಲ್ಪನೆ ಇತ್ಯಾದಿಗಳನ್ನು ಬದಿಗಿಟ್ಟು ನಾವು ಯಾವ ಪ್ರಶ್ನೆಗೆ/ಗಳಿಗೆ ಈ ಸಂಶೋಧನೆಯ ಮೂಲಕ ಉತ್ತರವನ್ನು ಹುಡುಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ.

ಜ್ಞಾನವೂ ಆತ್ಯಂತಿಕವಲ್ಲ
ಮೂಲ ಪ್ರಶ್ನೆಗೆ ಮತ್ತೆ ಹಿಂತಿರುಗುವುದಾದರೆ, ಸತ್ಯವನ್ನು ಆತ್ಯಂತಿಕವಾಗಿ ನೋಡುವುದು ಸರಿಯಲ್ಲ ಎನ್ನುವುದಾದರೆ ಜ್ಞಾನ ಎಂಬ ಮತ್ತೊಂದು ಪದವನ್ನು ಸಂಶೋಧನೆಯ ವ್ಯಾಖ್ಯಾನದಲ್ಲಿ ಅದರ ಬದಲಿಗೆ ಸೇರಿಸಿದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಜ್ಞಾನವೂ ಆತ್ಯಂತಿಕವಲ್ಲ. ನಾವು ಕಂಡುಕೊಂಡಿರುವ ಜ್ಞಾನ (ಅಂದರೆ ನಾವು ಹಾಕಿಕೊಂಡಿದ್ದ ಸಂಶೋಧನಾ ಪ್ರಶ್ನೆಗೆ ದೊರಕಿರುವ ಉತ್ತರ) ನಾವು ಅನುಸರಿಸಿದ ಎಪಿಸ್ಟಮಾಲಜಿಕಲ್ ಚೌಕಟ್ಟು, ಸೈದ್ದಾಂತಿಕ ಚೌಕಟ್ಟು, ನಾವು ವಿಶ್ಲೇಷಿರುವ ಆಕರಗಳು (ಅವುಗಳ ವ್ಯಾಪ್ತಿ, ಸಂಖ್ಯೆ, ಪರಿಮಾಣ ಮತ್ತು ಅವುಗಳನ್ನು ಆಯ್ಕೆ ಮಾಡಿಕೊಂಡ ಮಾನದಂಡ), ವಿಶ್ಲೇಷಣೆಗೆ ಬಳಸಿದ ವಿಧಾನ/ಗಳು ಇವುಗಳಿಗೆ ಅನುಗುಣವಾಗಿರುತ್ತದೆ. ಇವುಗಳಲ್ಲಿ ಯಾವುದೊಂದು ವ್ಯತ್ಯಾಸವದರೂ ನಾವು ಕಂಡುಕೊಂಡ ಉತ್ತರವೂ ಬದಲಾಗುತ್ತಿತ್ತು. ಆದ್ದರಿಂದ ಈ ಜ್ಞಾನವೂ ಕೂಡ ಆತ್ಯಂತಿಕವಲ್ಲ ಎಂಬ ಎಚ್ಚರ ನಮಗೆ ಇರಬೇಕಾಗುತ್ತದೆ. ಮತ್ತು ನಮ್ಮ ಸಂಶೋಧನೆಯ ಎಪಿಸ್ಟಮಾಲಜಿಕಲ್ ಚೌಕಟ್ಟು, ಸೈದ್ದಾಂತಿಕ ಚೌಕಟ್ಟು, ವಿಧಾನ, ಆಕರಗಳ ಸ್ವರೂಪ/ಆಯ್ಕೆ, ಉದ್ದೇಶ/ಸಂಶೋಧನಾ ಪ್ರಶ್ನೆ ಇವುಗಳನ್ನು ವಿವರವಾಗಿ ಸಂಶೋಧನಾ ವರದಿಯಲ್ಲಿ ಮಂಡಿಸಬೇಕಾಗುತ್ತದೆ.

ಸಂಶೋಧನೆಯಲ್ಲಿ ಈ ರೀತಿಯ ಎಚ್ಚರ ಇಲ್ಲದಿದ್ದರೆ ಸಾಮಾಜಿಕ ಅನಾಹುತಗಳಾಗುತ್ತವೆ. ಆ ರೀತಿಯ ಸಾಕಷ್ಟು ಅನಾಹುತಗಳನ್ನು ನಾವು ಕಾಣಬಹುದು. ಉದಾಹರಣೆಗೆ, ಯಾರೊ ಒಬ್ಬರು ಭಾರತದಲ್ಲಿ ಬ್ರಿಟಷರು ಬರುವುದಕ್ಕೆ ಮುಂಚೆ ಜಾತಿವ್ಯವಸ್ಥೆ ಇರಲಿಲ್ಲ ಎಂದು ಊಹಾಸಿದ್ದಾಂತ ಇಟ್ಟುಕೊಂಡು ಸಂಶೋಧನೆಗೆ ಹೊರಡುತ್ತಾರೆ, ಸಂಶೋಧನೆ ಮುಗಿಯುವ ಮುಂಚೆಯೇ ಆ ಊಹಾ ಸಿದ್ದಾಂತವೇ ಸರಿ ಎಂದು ವಾದಿಸಲು ಹೊರಡುತ್ತಾರೆ, ಮತ್ತು ತಮ್ಮ ವಾದವನ್ನು ಸಮರ್ಥಿಸುವ ಅಂಶಗಳನ್ನಷ್ಟೇ ತಮ್ಮ ಸಂಶೋಧನೆಯಲ್ಲಿ ಕಾಣುತ್ತಾರೆ (ಅದಕ್ಕೆ ವಿರುದ್ಧವಾದ ಅಂಶಗಳನ್ನು ನೋಡವುದಕ್ಕೆ ಅವರ ನಂಬಿಕೆ ಅವರಿಗೆ ದಾರಿ ಮಾಡಿಕೊಡುವುದಿಲ್ಲ), ಅದನ್ನೇ ತೀರ್ಮಾನವೆಂದು ಭಾವಿಸುತ್ತಾರೆ. ಈ ರೀತಿಯ ತಪ್ಪುಗಳು- ಒಂದೇ ಸಂಶೋಧನೆಯಲ್ಲಿ ಎಪಿಸ್ಟಮಾಲಜಿಕಲ್ ಮತ್ತು ಸೈದ್ದಾಂತಿಕ ಜಿಗಿತಗಳು; ಊಹಾ ಸಿದ್ದಾಂತವೆಂದು ಭಾವಿಸಿ ಸಂಶೋಧನೆಗೆ ಮುಂಚೆಯೇ ಅದನ್ನು ತೀರ್ಮಾನವೆಂದು ಭಾವಿಸಿಕೊಳ್ಳುವುದು; ಅದಕ್ಕೆ ಅನುಗುಣವಾದದ್ದನ್ನು ಮಾತ್ರ ಹೆಕ್ಕಿ ಆಕರವಾಗಿಸಿಕೊಳ್ಳುವುದು, ಅಥವಾ ಅದಕ್ಕೆ ವಿರುದ್ಧವಾದದ್ದು, ವಿಪರೀತವಾದದ್ದು ದೊರಕಿದರೆ ಅದನ್ನು ಕಾಣದೆ ಇರುವಂತಹ ತಪ್ಪುಗಳು ಇವೆಲ್ಲವೂ ಇಂದು ಸಂಶೋಧನೆಯ ಕ್ಷೇತ್ರದಲ್ಲಿ ರಾರಾಜಿಸುತ್ತಿದೆ.

ಇಂದು 21ನೇ ಶತಮಾನವನ್ನು knowledge economy ಎಂದು ಕರೆಯುತ್ತಿದ್ದಾರೆ. Knowledge ಅನ್ನು capital ಎಂದು ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಸಂಶೋಧನೆಗೆ, ಉನ್ನತಶಿಕ್ಷಣಕ್ಕೆ ಪ್ರಾಶಸ್ತ್ಯ ದೊರಕುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಜ್ಞಾನದ/ಅರಿವಿನ/ತಿಳುವಳಿಕೆಯ ಉತ್ಪಾದನೆಯ ನೆಲೆಯಾದ ಸಂಶೋಧನೆಯ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಂಡು, ಅದಕ್ಕೆ ಉತ್ತರಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಪುಟ್ಟ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳು ಸರ್ವಪರಿಹಾರಿ ಅಲ್ಲ. ಇವುಗಳು ಮಾನವಿಕ ಮತ್ತು ಸಮಾಜವಿಜ್ಞಾನಗಳಲ್ಲಿನ ನನ್ನ ಕೆಲವು ವರ್ಷಗಳ ಕೆಲಸದ ಹಿನ್ನೆಲೆಯಲ್ಲಿ ರೂಪಿತವಾದ ಕೆಲವೇ ಅಂಶಗಳ ಹಿನ್ನೆಲೆಯಲ್ಲಿನ ಕಿರುಟಿಪ್ಪಣಿ ಮಾತ್ರ.

My Blog List

  • Bhoota Kola - Recently I had an occasion to witness past/spirits/gods coming on Dalit bodies and others in the villages listening to this. The interesting aspect of t...
    16 years ago